Wednesday, February 26, 2020

ಸವತೆಕಾಯಿ vs ವೇಟ್ ಲಾಸ್


                                ಸವತೆಕಾಯಿ vs ವೇಟ್ ಲಾಸ್  
                     
“ಐವತ್ ರೂಪಾಯ್ಗೆ ಮೂರ್ ಕೆಜಿ ಸವತೆಕಾಯ್….ಕೋಲಾರ್ ಕಡೆ ಎಳೆ ಸವತೆಕಾಯ್….” ಅಂತ ಕೀಳು ದ್ವನಿಯಲ್ಲಿ ಒಂದೇ ಸಮನೆ ರಸ್ತೆ ಕಡೆಯಿಂದ ದ್ವನಿ ಕೇಳಿ ಬರುತ್ತಿತ್ತು. ಸವತೆಕಯಿ ಅಂದ ತಕ್ಷಣ ನನ್ನ ಕಿವಿ ನೆಟ್ಟಗಾಯಿತು. ಈ ನಡುವೆ ವೆಟ್ ಲಾಸ್ ಮತ್ತು ಯೋಗ ಅಂತ ಶುರು ಮಾಡಿದ ಮೇಲೆ ಆದಷ್ಟು ಬಾಯಿಯನ್ನು ಕುರುಕಲು ತಿಂಡಿಯಿಂದ ದೂರ ಇಡಲು ಪ್ರಯತ್ನಿಸುತ್ತಿದ್ದೆ. ಇಷ್ಟು ಕಡಿಮೆ ಬೆಲೆಗೆ ಎಳೆ ಸವತೆಕಾಯಿ ಸಿಕ್ಕಿದರೆ ಕೇಳಬೇಕೆ. ಇದನ್ನು ತೆಗೆದುಕೊಂಡು ಪ್ರೇಡ್ಜ್ ನಲ್ಲಿ ಇಟ್ಟರೆ ಹದಿನೈದು ದಿನಕ್ಕೆ ಯಾವ ಯೋಚನೆ ಇಲ್ಲ. ಅದು ಅಲ್ಲದೆ ಸವತೆಕಾಯಿ ತಿಂದರೆ ಬೇಗ ಸಣ್ಣಗಾಗುತ್ತಾರೆ ಅಂತ ಯೋಗ ಕ್ಲಾಸ್ ನಲ್ಲಿ ಹೇಳಿದ್ದು ನೆನಪಾಯಿತು. ಹದಿನೈದು ದಿನದಲ್ಲಿ ಒಂದೆರಡು ಕೆ.ಜಿ. ಇಳಿದರೆ ಅಷ್ಟೇ ಸಾಕು ಅಂತ ಮನಸ್ಸಿನಲ್ಲಿ ಲೆಕ್ಕಚಾರ ಹಾಕಿ ಮೂರು ಕೆ,ಜಿ ಸವತೆಕಾಯಿ ನಮ್ಮ ಮನೆ ಪ್ರೀಡ್ಜ್ ನಲ್ಲಿ ರಾರಾಜಿಸಿದವು.
ಮೊದಲ ದಿನ ಬಹಳ ಉತ್ಸಾಹದಲ್ಲಿ ಸವತೆಕಾಯಿ ಯನ್ನು ಗೋಲಾಕಾರದಲ್ಲಿ ಕತ್ತರಿಸಿ ಉಪ್ಪು, ಖಾರ ಹಾಕಿ ತಿಂದೆ. ಬಾಯಿಗು ರುಚಿ ಅನಿಸಿತು. ಹೀಗೆ ಮಾಡಿದರೆ ಸ್ವಲ್ಪ ಸಣ್ಣಗಾಗುವುದಂತು ಕಂಡಿತ ಅಂತ ಲೆಕ್ಕಚಾರ ಹಾಕಿದೆ. ಮಾರನೆ ದಿನ ಸಣ್ಣಗೆ ಹೆಚ್ಚಿ ಉಪ್ಪು ಖಾರ ಹಾಕಿ ತಿಂದೆ. ಪರವಾಗಿಲ್ಲ. ಆದರು ಯಾಕೋ ಈ ಸವತೆಕಾಯಿ ತಿಂದರೆ ಶೀತ ಆಗುವುದು ಎಂದನಿಸಿತು. ಮತ್ತೆರಡು ದಿನ ಏನೇನೊ ಸರ್ಕಸ್ ಮಾಡಿ ಸವತೆಕಾಯಿ ತಿಂದೆ. ಪ್ರೀಡ್ಜ್ ನಲ್ಲಿ ಇಟ್ಟರು ಯಾಕೋ ಸವತೆಕಾಯಿ ಬಾಡುವುದು ಎಂದನಿಸಿತು.
ಮಾರನೆ ದಿನ ಅಡುಗೆ ಮನೆ ಡಬ್ಬಗಳನ್ನು ಕ್ಲೀನ್ ಮಾಡುವಾಗ ಅಕ್ಕಿ ಹಿಟ್ಟು ನೋಡಿದೆ. ತುಂಬಾ ದಿನ ಆಯಿತು ಉಪಯೋಗಿಸದೆ ಹಾಗೆ ಇಟ್ಟರೆ ಹಾಳಾಗುವುದು ಎಂದು ಯೋಚಿಸಿ, ಸವತೆಕಾಯಿ,ಈರುಳ್ಳಿ ಹಾಕಿ ಒಡಪೆ(ಅಕ್ಕಿ ರೊಟ್ಟಿ) ಮಾಡಿವ ಪ್ಲಾನ್ ಮಾಡಿದೆ. ಚನ್ನಾಗಿ ಎಣ್ಣೆ ಹಾಕಿ ಬೆಯಿಸಿದ ರೊಟ್ಟಿ, ಪಕ್ಕದಲ್ಲಿ ಬೆಣ್ಣೆ, ಊರಿನ ಜೋನಿ ಬೆಲ್ಲ, ಎಲ್ಲವು ಸೇರಿ ಒಂದೆರಡು ತುತ್ತು ಜಾಸ್ತಿಯೆ ಇಳಿಯಿತು.
ರೊಟ್ಟಿ ತಿನ್ನಬೇಕಿದ್ದರೆ ಮಗಳಿಗೆ ತಕ್ಷಣ ನೆನಪಾಯಿತು, “ಅಮ್ಮಾ, ಅಜ್ಜಿ ಮಾಡೋ ಸವತೆಕಾಯಿ ಕರೆ(ಶೇವ್) ಮಾಡು. ಹೇಗೋ ಪ್ರೀಡ್ಜ್ ತುಂಬಾ ಸವತೆಕಾಯಿ ಇದೆ” ಅಂತ ಇನ್ನೊಂದು ಹೊಸ ಐಡಿಯಾ ಕೊಟ್ಟಳು. ಅದಕ್ಕೆ ಮನೆಯವರು ಸಾಥ್ ನೀಡಿದರು. ಏನ್ ಮಾಡೋದು ಮೇಜೋರಿಟಿ ಸವತೆಕಾಯಿ ಕರೆಯ ಮೇಲೆ ಇತ್ತು. ನನ್ನ ಮನಸ್ಸು ಅದನ್ನೆ ಹಂಬಲಿಸುತ್ತಿತ್ತು. ಮಾರನೆ ದಿನ ಸವತೆಕಾಯಿ ಕರೆ ಮಾಡುವ ಪ್ಲಾನ್ ಯಶಸ್ಸಾಯಿತು. ನನ್ನ ಸವತೆಕಾಯಿ ದಯಟ್ ನಿಧಾನವಾಗಿ ಮೂಲೆಗೆ ಸರಿಯುತ್ತಿತ್ತು.
ಇನ್ನು ಮೂರ್ನಾಲ್ಕು ಸವತೆಕಾಯಿ ಪ್ರೀಡ್ಜ್ ನಲ್ಲಿ ರಾರಾಜಿಸುತ್ತಿತ್ತು. ಒಂದು ದಿನ ಫಲಾವ ಮಾಡಿ ಅದಕ್ಕೆ ಸವತೆಕಾಯಿ ರೈತ ಮಾಡಿದೆ. ಇನ್ನೊದು ದಿನ ಮಜ್ಜಿಗೆ ಹುಳಿ, ಹೀಗೆ ದಿನ ಒಂದೊಂದು ಮಾಡಿ ಪ್ರೀಡ್ಜ್ ನಲ್ಲಿ ಇದ್ದ ಸವತೆಕಾಯಿ ಖಾಲಿ ಮಾಡಿದೆ.
ಮರುದಿನ ಅದೇ ದ್ವನಿ  “ಐವತ್ ರೂಪಾಯ್ಗೆ ಮೂರ್ ಕೆಜಿ ಸವತೆಕಾಯ್….ಕೋಲಾರ್ ಕಡೆ ಎಳೆ ಸವತೆಕಾಯ್….”  ಕೇಳಿಸಿತು. ಅಪ್ಪಿ ತಪ್ಪಿಯು ಆ ಕಡೆ ಹೋಗಲಿಲ್ಲ.


ಚಿತ್ರದುರ್ಗದ ಕಲ್ಲಿನ ಕೋಟೆ


                            ಚಿತ್ರದುರ್ಗದ ಕಲ್ಲಿನ ಕೋಟೆ

“ಚಿತ್ರದುರ್ಗದ ಕಲ್ಲಿನ ಕೋಟೆ…” ಈ ಹಾಡು ಕೇಳಿದ ತಕ್ಷಣ ನೆನಪಾಗುವುದೆ ವಿಷ್ಣುವರ್ದನ ಸರ್ ಮತ್ತು ಜಯಂತಿ ಅಮ್ಮ. ಚಿಕ್ಕ ವಯಸ್ಸಿನಲ್ಲಿ ನಾಗರಹಾವು ಸಿನಿಮಾ ನೋಡಿದಾಗಲೆ ಅಂದುಕೊಂಡಿದ್ದೆ ಯಾವಾಗಾದರು ದುರ್ಗದ ಕೋಟೆ ಹತ್ತಬೇಕು ಅಂತ.
ನಮ್ಮೂರಿಂದ ಬೆಂಗಳೂರಿಗೆ ಹೋಗುವಾಗ ಯಾವಾಗಲು ಚಿತ್ರದುರ್ಗದ ಮೇಲೆ ಹೋಗಬೇಕು. ಅಲ್ಲಿ ಬೇಕಾದಷ್ಟು ಬಾರಿ ಊಟ ಅಥವಾ ತಿಂಡಿ ತಿಂದು ಹೋಗಿದ್ವಿ. ಆದರೆ ಯಾವಾಗಲು ಕೋಟೆ ಹತ್ತಬೇಕು ಅಂತ ಅಂದುಕೊಂಡಾಗಲೆಲ್ಲ ಏನಾದರು ಕೆಲಸ ಅಥವಾ ಊರಿಗೆ ಹೋಗುವ ಅವಸರದಲ್ಲಿ ನಾಳೆ..ನಾಳೆ ಅಂತ ಅಂದುಕೊಂಡಿದ್ದು ಬರಲೆ ಇಲ್ಲ. ಮೊನ್ನೆ ಮಗಳು ಮದಕರಿ ನಾಯಕ ಪಾಠವನ್ನು ಓದುತ್ತಿದ್ದಳು. ಓಬವ್ವನ ಮೇಲೆ ಏನೇನೋ ಪ್ರಶ್ನೆ ಕೇಳುತ್ತಿದ್ದಳು. ಹಾಗೆ ಅಪ್ಪ-ಮಗಳ ಪ್ರಶ್ನೋತ್ತರದಲ್ಲಿ ಚಿತ್ರದುರ್ಗಕ್ಕೆ ಅಂತನೆ ಹೋಗಿ ಬರುವ ಪ್ಲಾನ್ ಮಾಡಿದೆವು.  ಯಾವ ಕೆಲಸದ ಒತ್ತಡವು ಇಲ್ಲದೆ ಚಿತ್ರದುರ್ಗಕ್ಕೆಂದೆ ಹೊರಟೆವು.
ಬಿಸಿಲು ನೆತ್ತಿಗೆ ಬರೋ ವೆಳೆಗೆ ಕೋಟೆ ಹತ್ತಿ-ಇಳಿಯ ಬೇಕು ಅಂತ ಮನೆಯನ್ನು ಸ್ವಲ್ಪ ಬೇಗ ಬಿಟ್ಟೆವು.ಅಲ್ಲಿನ ಒಂದು ಒಳ್ಳೆಯ (ಎಲ್ಲರ ಬಾಯಲ್ಲು ಕೇಳಿದ್ದು) ಹೋಟೆಲ್ಗೆ ಹೋದೆವು. ನನಗೆ ಆ ಹೋಟೆಲ್ ನಲ್ಲಿ ಬರೆದ ಬೊರ್ಡ ಬಾರಿ ವಿಚಿತ್ರವೆನಿಸಿತು. ಉದಾಹರಣೆಗೆ ನಿಮಗೆ ಖಾಲಿ ದೋಸೆಗೆ ಚಟ್ನಿ ಕೊಡಲಾಗುವುದು. ಪಲ್ಯ ಬೇಕಿದ್ದರೆ ಕೇಳಿ. ಪಲ್ಯಕ್ಕೆ ತುಪ್ಪ ಬೇಕಿದ್ದರೆ ಕೇಳಿ ತೆಗೆದುಕೊಳ್ಳಿ. ಹೀಗೆ ಎರಡು ಮೂರು ತರಹ ಬರೆದಿದ್ದರು. ಯಾವಾಗಲು ಪ್ಲೇಟ್ ನಲ್ಲಿ ಕೈ ತೊಳೆಯಬೇಡಿ. ಹೀಗೆ ಏನಾದರು ಬರೆದದ್ದು ನೋಡಿದೆ ಹೊರತು ಈ ತರಹ ಬೋರ್ಡ ಮೊದಲ ಬಾರಿ ನಾನು ನೋಡಿದ ಕಾರಣ ನನಗೆ ವಿಚಿತ್ರವೆನಿಸಿತು. ನಂತರ ಯೋಚಿಸಿದರೆ ಯಾವುದು ಹಾಳಾಗಬಾರದು ಎಂದು ಈ ನಿಯಮ ಮಾಡಿದ್ದಾರೆನೋ. ಬಂದವರ ಹತ್ತಿರ ಹೇಳಿದ್ದೆ ಹೇಳುತ್ತಾ ಇರುವುದಕಿಂತ ಬೋರ್ಡ ಹಾಕಿದರೆ ಮುಗಿಯಿತು. ಬೇಕಾದವರು ಓದಿಕೊಳ್ಳುತ್ತಾರೆ.  ಏನೆ ಆಗಲಿ ದೋಸೆ ಮಾತ್ರ ಸುಪರ್ ಆಗಿತ್ತು. ತುಪ್ಪ ಕೇಳಿ ತೆಗೆದುಕೊಂಡು ಚನ್ನಾಗಿ ತಿಂದೆವು.
ಸುಮಾರು ಎಂಟು ಗಂಟೆಯ ಹೊತ್ತಿಗೆ ಟಿಕೆಟ್ ತೆಗೆದುಕೊಂಡೆವು. ನಮಗೆ ಇಪ್ಪತೈದು ರೂಪಾಯಿ ಆದರೆ ಫಾರೆನರ್  ಅವರಿಗೆ ಮುನ್ನೂರು ರೂಪಾಯಿ. ಸ್ವಲ್ಪ ಅತಿ ಅನಿಸಿತು. ಎಲ್ಲಾ ಕಡೆ ಅವರಿಗೆ ಜಾಸ್ತಿನೆ. ಆದರೆ ಏಳು ಏಂಟು ಪಟ್ಟು ಜಾಸ್ತಿ ಇಡುವುದು ಅತಿ. ನಾವು ನಮ್ಮ ಟಿಕೆಟ್ ತೆಗೆದುಕೊಂಡು ಏಳು ಸುತ್ತಿನ ಕಲ್ಲಿನ ಗುಡ್ಡ ಹತ್ತಲು ಶುರು ಮಾಡಿದೆವು. ಅಲ್ಲಿ ಮ್ಯಾಪ್ ಹಾಕಿದ್ದರು. ಅದರ ಅನುಸಾರ ನೋಡುತ್ತಾ ಹೋದೆವು. ಮದ್ದು ಬಿಸುವ ಕಲ್ಲು, ಗಾರೆ ಬಿಸುವ ಕಲ್ಲು, ನೋಡಿದೆವು. ಕಲ್ಲಿನ ಮೆಟ್ಟಿಲು ಸುತ್ತಲು ಕಲ್ಲು ಬಂಡೆಗಳು. ಆದರು ಅಷ್ಟು ಕಷ್ಟ ಅಂತ ಅನಿಸಲಿಲ್ಲ.
ಇಲ್ಲಿ ನಮ್ಮೆಲ್ಲರಿಗೂ ಆಸಕ್ತಿ ಇರುವುದು ಒಬವ್ವನ ಕಿಂಡಿ. ನಾಗರಹಾವು ಸಿನಿಮಾದಲ್ಲಿ ತುಂಬಾ ಸೊಗಸಾಗಿ ತೋರಿಸಿದ ಕಾರಣವೋ, ಪುಸ್ತಕದಲ್ಲಿ ಓದಿದ ನೆನಪಿಗೆ ಬಹಳ ಉತ್ಸಾಹದಲ್ಲಿ ಹೋದೆವು. ಅಲ್ಲಿ ಎಲ್ಲಾ ಕಡೆ ನಾಮಫಲಕ ಹಾಕಿರುವ ಕಾರಣ ಗೈಡ್ ಏನು ಬೇಕಿಲ್ಲ. ಆದರು ಗೈಡ್ ತೆಗೆದುಕೊಳ್ಳುವುದು  ಅವರವರ ಆಸಕ್ತಿಗೆ ಬಿಟ್ಟಿದ್ದು.
ಅಲ್ಲಿ ಸ್ವಲ್ಪ ನೀರು ಹರಿಯುತ್ತಿತ್ತು. ಸ್ವಲ್ಪ ಮುಂದೆ ಓಬವ್ವನ ಕಿಂಡಿ. ಶತ್ರುಗಳು ನುಸುಳಿ ಬಂದು ಆಕೆ ಅವರನ್ನು ಸಾಯಿಸಿದ್ದು. ನಾವು ಅಲ್ಲಿ ಹೋಗಿ ಸ್ವಲ್ಪ ಪೋಟೋ ತೆಗೆದುಕೊಂಡು ಬಂದೆವು. ಬಂಡೆಯ ಮೇಲೆ ಕೆಲವರು ತಮ್ಮ ಹೆಸರು ಮತ್ತು ತಾವು ಪ್ರೀತಿಸುವವರ ಹೆಸರನ್ನು ಬರೆದಿದ್ದರು. ಬರೆಯಲು ಎಲ್ಲು ಪಟ್ಟಿ ಪೆನ್ನು ಸಿಗುವುದಿಲ್ಲವೇನೋ ಅನಿಸುವುದು.
ಆದದ ನಂತರ ಹಾಗೆ ಗುಡ್ಡ ಹತ್ತುತ್ತ ಕೆಲವು ದೇವಸ್ಥಾನಗಳು. ಪೂಜೆಗಳೆನು ನಡೆಯುತ್ತಿರಲಿಲ್ಲ. ಎಲ್ಲಾ ಕಲ್ಲಿನಲ್ಲಿ ಮಾಡಿರುವುದು. ಗುಡ್ಡದ ಮೇಲೆ ಹೋದ ಮೇಲೆ ಸುತ್ತಲಿನ ದೃಶ್ಯ ನೋಡಲು ತುಂಬಾ ಚನ್ನಾಗಿವೆ. ಸುತ್ತಲಿನ ಕಲ್ಲಿನ ಗುಡ್ಡ. ದೂರದಿಂದ ಕಾಣುವ ಗಾಳಿಯಂತ್ರ. ತುಂಬಾ ಸೊಗಸಾಗಿದೆ.
ಒಟ್ಟಿನಲ್ಲಿ ಒಮ್ಮೆ ದುರ್ಗದ ಕೋಟೆ ನೋಡುವಂತ ಜಾಗ.