Thursday, August 29, 2019

ಕುಂಕ್ರಿಯ ಅಡುಗೆ


                                         ಕುಂಕ್ರಿಯ ಅಡುಗೆ
ಕುತ್ತಲ್ಲಿ ಕೂರದೆ ಇರೋ ಕುಂಕ್ರಿಗೆ ಶಾಲೆ ಇಲ್ಲದೆ ಇದ್ದಾಗ ಅವಳ ಅಮ್ಮನಿಗೆ ಅವಳನ್ನು ಸಂಭಾಳಿಸುವುದು ಬಹಳ ಕಷ್ಟದ ಕೆಲಸವೆ ಆಗಿತ್ತು. ಏನಾದರು ಮಾಡ್ತಾನೆ ಇರ್ಬೇಕು ಇವಳಿಗೆ. ಒಂದು ರವಿವಾರ ಕುಂಕ್ರಿಗೆ ಅಮ್ಮನ ಜೊತೆ ಅಡಿಗೆ ಮಾಡುವ ಆಸೆ ಶುರು ಆಯಿತು. ಅವಳು ಅಡಿಗೆ ಮನೆಗೆ ಬಂದರೆ ಏನು ಕೆಲಸ ಆಗದು ಎಂದು ಅಮ್ಮನ ತಕರಾರು. ಅದು ಅಲ್ಲದೆ ಏನಾದರು ಕೈ ಕೊರೆದುಕೊಂಡು ಏನಾದರು ಹೆಚ್ಚು ಕಮ್ಮಿ ಆದ್ರೆ ಅನ್ನೊ ಹೆದರಿಕೆ ಕುಂಕ್ರಿಯ ತಾಯಿಗೆ. ಆದರೆ ಈ ರವಿವಾರ ತನ್ನದೆ ಅಡಿಗೆ ಎಂದು ಹಠ ಹಿಡಿದಳು. ಅಮ್ಮ ಕುಂಕ್ರಿಗೆ ಎಷ್ಟೆ ಸಮಜಾಯಿಸಿದರು ಅವಳು ತನ್ನ ಹಠ ಬಿಡಲಿಲ್ಲ. ಆಗ ಹಾಲ್ ನಲ್ಲಿ ಪೇಪರ್ ಓದುತ್ತ ಕುಳಿತಿರುವ ಕುಂಕ್ರಿಯ ಅಪ್ಪ ಅಡಿಗೆ ಮನೆಗೆ ಬಂದು ಒಂದು ನಿರ್ಧಾರ ಮಾಡಿದರು. ಕುಂಕ್ರಿಯು  ಏನು ಚಿಕ್ಕ ಮಗು ಅಲ್ಲ. ಅವಳು ಒಂದೊಂದೆ ಕೆಲಸ ಕಲಿಯಲಿ. ಒಬ್ಬಳೆ ಮಗಳು ಎಂದು ಮನೆ ಕೆಲಸ  ಕಲಿಯದೆ ಇದ್ದರೆ ಮುಂದೆ ಅವಳಿಗೆ ತೊಂದರೆ ಎಂದು ಹೇಳಿದರು. ಅಪ್ಪ ನ ಮಾತಿಗೆ ಕುಂಕ್ರಿಗೆ ಖುಶಿ ಆಯಿತು. ಕುಂಕ್ರಿಯ ಅಮ್ಮನಿಗೂ ಹೌದು ಎನಿಸಿ ಮಗಳಿಗೆ ಹೇಳಿದಳು, “ಏನಾದರು ಬೇಕಿದ್ದರೆ ನನ್ನನ್ನು ಕರೆ. ನಾನು ಇವತ್ತು ಬೇರೆ ಕೆಲಸ ಮಾಡಿಕೊಳ್ಳುವೆ” ಎಂದಳು. ಕುಂಕ್ರಿಯು ಇದಕ್ಕೆ ತಲೆಯಾಡಿಸಿ “ಏನಾದರು ಬೇಕಿದ್ದರೆ ನಾನೆ ಕರೆಯುವೆ ನೀವು ಮದ್ಯ ಬಂದು ತೊಂದರೆ ಕೊಡಬೇಡಿ ಹಾಗು ತನ್ನ ಅಡುಗೆ ಮಗಿದ ಮೇಲೆ ನಾನೆ ಟೇಬಲ್ ಮೇಲೆ ತರುವೆ ನೀವು ಬರಬೇಡಿ” ಎಂದು ಹೇಳಿದ್ದಳು.  ಅಮ್ಮನ ಜೊತೆ ಯಾವಾಗಲು ಅಡಿಗೆ ಮನೆಯಲ್ಲಿ ಅವಳ ಹಿಂದೆ ಇರುವ ಕುಂಕ್ರಿಗೆ ಸುಮಾರಾಗಿ ಅಡುಗೆಗ ಮಾಹಿತಿ ಇತ್ತು. ತನ್ನ ಪ್ರೀತಿಯ ವೆಜಿಟೆಬಲ್ ಪಲಾವ್ ಮಾಡಲು ಅಣಿ ಮಾಡಿದಳು. ಒಂದೊಂದೆ ತರಕಾರಿಯನ್ನು ಹೆಚ್ಚಿದಳು. ತನ್ನದೆ ಆದ ರೀತಿಯಲ್ಲಿ ಮಸಾಲೆ ಹಾಕಿದಳು. ಅಂತು ಕುಕ್ಕರಿನಲ್ಲಿ ಪಲಾವ್ ಮಾಡಲು ಇಟ್ಟಳು. ಮೊದಲೆ ಅವಳು ಹೇಳಿದಂತೆ ಅಡುಗೆ ಆಗುವ ತನಕ ಅಲ್ಲಿ ಯಾರು ಬರಲಿಲ್ಲ. ಕುಂಕ್ರಿಯೆ ಟೇಬಲ್ ಮೇಲೆ ಕುಕ್ಕರ್ ತಂದಿಟ್ಟಳು. ಪ್ಲೇಟ್ ಹಾಕಿ ಅಪ್ಪ-ಅಮ್ಮನನ್ನು ಕರೆದಳು. ಕುಕ್ಕರ್ ಮುಚ್ಚಲ ತೆಗೆದಾಗ ಅನ್ನ ಎಲ್ಲ ಚನ್ನಾಗೆ ಬೆಂದಿತ್ತು. ಒಳ್ಳೆ ಘಮವು ಬರುತ್ತಿತ್ತು. ಅಪ್ಪ-ಅಮ್ಮನಿಗೆ ಉತ್ಸಾಹದಲ್ಲಿ ಬಡಿಸಿದಳು. ವೆಜಿಟೆಬಲ್ ಪಲಾವ್ ತುಂಬಾ ಚನ್ನಾಗಿ ಇತ್ತು. ಮಸಾಲೆ ಅದ್ಬುತವಾಗಿತ್ತು. ಅಮ್ಮ ಕೇಳಿದಳು,” ಕುಂಕ್ರಿ ಮಸಾಲೆಗೆ ಏನೇನ್ ಹಾಕಿದ್ದಿಯಾ ಮುಂದಿನ ಸಲ ನೀನೆ ಮಸಾಲೆ ಮಾಡು ಅಂತ. ಅದಕ್ಕೆ ಕುಂಕ್ರಿಯಲ್ಲಿ ಉತ್ತರ, “ಅಮ್ಮಾ ಅಡಿಗೆ ಮನೆಯಲ್ಲಿ ಏನೇನ್ ಮಸಾಲಾ ಡಬ್ಬದಲ್ಲಿ ಇದಿಯೋ ಅದೆಲ್ಲ ಸ್ವಲ್ಪ-ಸ್ವಲ್ಪ ಹಾಕಿದ್ದೀನಿ. ಈಗ್ ಕೇಳಿದರೆ ನನಗೆ ಹೇಳಲು ಬರಲ್ಲ” ಅಂದಳು. ಮಗಳ ಮಾತಿಗೆ ಅಪ್ಪ-ಅಮ್ಮನಿಗೆ ನಗು ಬಂದಿತು. ಎಲ್ಲ ಪಲಾವ್ ತಿಂದು ಅಡುಗೆ ಮನೆಗೆ ಹೋದರೆ ಎಲ್ಲಾ ಚಲ್ಲಾ-ಪಿಲ್ಲಿ ಆಗಿತ್ತು. ಗೊಡಂಬಿ ಡಬ್ಬ ಮತ್ತು ತುಪ್ಪ ಖಾಲಿ ಆಗಿತ್ತು.

Sunday, August 25, 2019

ನೀವೆ ಹೇಳಿ


                                            ನೀವೆ ಹೇಳಿ
ನಾನು ಸ್ವಲ್ಪ  ಮದ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದವನು. ಅಪ್ಪ ಒಳ್ಳೆ ಉದ್ಯೊಗದಲ್ಲಿ ಇದ್ದರು. ಅಮ್ಮ ಸ್ಕೊಲ್ ನಲ್ಲಿ ಟೀಚರ್ ಆಗಿದ್ದರು. ನಾನು ಮತ್ತು ಅಕ್ಕ ನಮ್ಮದೆ ಒಂದು ಪ್ರಪಂಚವಾಗಿತ್ತು.
ಮೊದಲಿನಿಂದಲು ನಾನು ಮತ್ತು ಅಕ್ಕ ಓದಿನಲ್ಲಿ ಮುಂದು. ಅದಕ್ಕೆ ಕಾರಣ ನಮ್ಮ ಅಮ್ಮ. ಅಮ್ಮ ಯಾವಗಲು ವಿದ್ಯಾಬ್ಯಾಸಕ್ಕೆ ತುಂಬಾ ಬೆಲೆ ಕೊಡುತ್ತಿದ್ದರು. ವಿದ್ಯೆ ಯಾರು ಕದಿಯಲು ಆಗದ ಆಸ್ತಿ ಎಂದು ಯಾವಾಗಲು ಹೇಳುತ್ತಿದ್ದರು. ಅದು ನಿಜವೆ. ಆದರೆ ಕೆಲವೊಮ್ಮೆ ಅಮೃತವು ವಿಷ ಆದಂತೆ ಅಮ್ಮ ನಮ್ಮನ್ನು ಪುಸ್ತಕದ ಹುಳವನ್ನಾಗಿ ಮಾಡಿ ಬಿಟ್ಟಿದ್ದರು. ಬೇರೆ ಪ್ರಪಂಚವೆ ನಮಗೆ ತಿಳಿದಿರಲಿಲ್ಲ.  ಸ್ಕೂಲ್ ನಲ್ಲಿ ನನ್ನ ವಾರಗೆಯವರು ಟಿ.ವಿ ಯಲ್ಲಿ ಬಂದ ಕೆಲವು ಕಾರ್ಯಕ್ರಮದ ಬಗ್ಗೆ ಮಾತಾಡುತ್ತಿದ್ದರೆ ನನಗೆ ಅದರ ಗಂಧ ಗಾಳಿಯು ಇಲ್ಲದೆ ತೆಪ್ಪಗೆ ಕುಳಿತಿರುತ್ತಿದ್ದೆ. ಇನ್ನು ಹೊಸದಾಗಿ ಬಂದ ಸಿನಿಮಾಗಳ ಬಗ್ಗೆ ಪೇಪರ್ ನಲ್ಲಿ ಓದುವ ಮತ್ತು ಪೋಟೋ ನೋಡುವ ಭಾಗ್ಯವೆ ಹೊರತು ನೋಡುವ ಭಾಗ್ಯ ಇರಲಿಲ್ಲ. ಒಂದು ದಿನವು ನಮ್ಮನ್ನು ಸಿನಿಮಾಕ್ಕೆ ಕರೆದುಕೊಂಡು ಹೊಗಿರಲಿಲ್ಲ.
ಇನ್ನು ಕಾಲೇಜ್ ನಲ್ಲಿ ಎಲ್ಲಾ ಹೊಟೆಲ್, ಕಾಫಿ ಡೇ ಅಂತ ಹೋದ್ರೆ ನಾನು ಮತ್ತು ಅಕ್ಕ ಯಾವಗಲು ಆ ಕಡೆ ತಲೆ ಹಾಕಿಲ್ಲ. ನಾವು ಪ್ರೇಂಡ್ಸ್ ಜೊತೆ ಆಚೆ ಹೋಗೊದು ಇರಲಿ ಅಪ್ಪ-ಅಮ್ಮನ  ಜೊತೆ ಆಚೆ ತಿನ್ನಲು ಹೋಗಿದ್ದಿಲ್ಲ. ನಮಗೆ ಹೊಟೆಲ್ ನಲ್ಲಿ ಸಿಗುವ ಕೆಲವು ತಿಂಡಿಗಳ ಹೆಸರೆ ಗೊತ್ತಿರಲಿಲ್ಲ. ಇಗಿನ ಕಾಲದಲ್ಲಿ ನಮ್ಮಂತವರು ಇರುವುದು ವಿರಳದಲ್ಲೆ ವಿರಳ ಅನ್ನಬಹುದು. ಕೇಳಿದವರಿಗು ಆಶ್ಚರ್ಯವಾಗಬಹುದು.
ನಮ್ಮ ಹುಟ್ಟು ಹಬ್ಬದ ದಿನ ಕೊಬ್ಬರಿ ಮಿಟಾಯಿ, ಕೆಸರಿ ಬಾತ್ ಮಾಡುತ್ತಿದ್ದರು. ನಮ್ಮ ಅಕ್ಕ-ಪಕ್ಕದಲ್ಲಿದ್ದ ಗೆಳೆಯರನ್ನು ಕರೆಯುತ್ತಿದ್ದೆವು. ಚಿಕ್ಕ ವಯಸ್ಸಿನಲ್ಲಿ ತುಂಬಾ ಖುಶಿ ಆಗುತ್ತಿತ್ತು. ಆಗ  ನಮಗೆ ಏನು ಅನಿಸುತ್ತಿರಲಿಲ್ಲ. ಕ್ರಮೇಣ ಹೈಸ್ಕೂಲ್ ಲೆವಲ್ ಗೆ ಬಂದ ಮೇಲೆ ಸ್ವಲ್ಪ ಇರಿಸು-ಮುರಿಸು ಆಗುತ್ತಿತ್ತು. ಬೇರೆಯವರ ಮನೆಯಲ್ಲಿ ಹೊಸ-ಹೊಸ ತಿಂಡಿಗಳಾದ  ಫಿಂಗರ್ ಚಿಪ್ಸ್, ಬರ್ಗರ್, ಮಾಡುತ್ತಿದ್ದರು. ಕೇಕ್ ತರುತ್ತಿದ್ದರು. ಆದರೆ ಅಮ್ಮ ಇದಕ್ಕೆಲ್ಲ ವಿರುದ್ದವಾಗಿದ್ದರು. ಸಂಪ್ರಧಾಯವಾಗಿ ಎಣ್ಣೆ ನೀರು, ದೇವಸ್ಥಾನ ಅಂತ ನಮ್ಮ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದರು. ನಮ್ಮ ಆಸೆಯನ್ನು ಕೇಳಿದವರೆ ಅಲ್ಲ. ಆದರೆ ಅವರ ದೃಷ್ಟಿಯಲ್ಲಿ ನಮ್ಮನ್ನು ಚನ್ನಾಗಿಯೆ ಬೆಳೆಸಿದ್ದಾರೆ.
ಇನ್ನು ಅಪ್ಪ ಒಳ್ಳೆಯ ಕೆಲಸದಲ್ಲಿ ಇದ್ದರು. ನಮ್ಮ ಮನೆಯ ವ್ಯವಹಾರ ಅಮ್ಮನೆ ನೋಡಿಕೊಳ್ಳುವದಾಗಿತ್ತು. ಹತ್ತು ರೂಪಾಯಿಯಲ್ಲಿ ಎಂಟು ರೂಪಾಯಿ ಉಳಿಸುವ ಬುದ್ದಿ ಅವರದಾಗಿತ್ತು. ಅಪ್ಪ ನ ಆಸೆ ಏನಿತ್ತೊ ಗೊತ್ತಿಲ್ಲ ಆದರೆ ಅಮ್ಮ ಹೇಳಿದ ಹಾಗೆ ನಡೆಯುತ್ತಿತ್ತು. ಅವರು ಯಾವಾಗಲು ಕೈ ಬಿಚ್ಚಿ ಖರ್ಚು ಮಾಡಿದ್ದು ನೋಡಿಲ್ಲ. ಅವರ ವಯಕ್ತಿಕ ಆಸೆಯನ್ನು ಯಾವಾಗಲು ಹೊರ ಹಾಕಿಲ್ಲ.
ಅಮ್ಮ ನಮ್ಮ ಓದಿಗೆ ಮಾತ್ರ ಯಾವ ಒತ್ತಾಯವನ್ನು ಮಾಡಿರಲಿಲ್ಲ. ನಮಗೆ ಬೇಕಾದ ವಿಷಯ ಆರಿಸಿಕೊಳ್ಳುವ ಸ್ವಾತಂತ್ರ ನೀಡಿದ್ದರು. ಆ ಕಾರಣದಿಂದಲೆ ನಾನು ಇಂಜಿನಿಯರಿಂಗ್ ಓದಿದೆ. ಚನ್ನಾಗಿ ಓದಿದೆ. ಮನೆಯಲಲ್ಲು ಅಪ್ಪ-ಅಮ್ಮ ಒಳ್ಳೆ ಬೆಂಬಲ ದೊರಕಿತು. ಅಪ್ಪ ಅಮ್ಮ ಓದು ಮತ್ತು ಪುಸ್ತಕ ಕೊಡಿಸುವ ವಿಷಯದಲ್ಲಿ ಯಾವಾಗಲು ಚಕಾರ ಎತ್ತಿದವರಲ್ಲ. ಓದೆ ನನ್ನ ಪ್ರಪಂಚವಾದ ಕಾರಣ ಒಳ್ಳೆ ಅಂಕ ಪಡೆದು ಇಂಜಿನಿಯರ್ ಆದೆ. ಕ್ಯಾಂಪಸ್ ನಲ್ಲಿ ಒಳ್ಳೆ ಉದ್ಯೋಗ ದೊರಕಿತು. ಬೆಂಗಳೂರಿನಿಂದ ಮುಂಬೈ ನಲ್ಲಿ ಉದ್ಯೋಗ ದೊರಕಿತು. ಮೊದಲ ಬಾರಿ ಅಪ್ಪ-ಅಮ್ಮ ನ ಬಿಟ್ಟು ಮನೆಯಿಂದ ಆಚೆ ಹೋದೆ. ಹೊಸ ಊರು, ಕೈನಲ್ಲಿ ಒಳ್ಳೆ ಉದ್ಯೊಗ, ಒಳ್ಳೆ ಸಂಬಳ ಅದಕ್ಕು ಮಿಗಿಲಾಗಿ ಯಾವಾಗಲು ಸಿಗದೆ ಇರೋ ಸ್ವತಂತ್ರ.
ಯಾವಾಗಲು ಎರಡು ಪ್ಯಾಂಟ್-ಶರ್ಟ ಇದ್ದ ನನಗೆ ನನ್ನ ಕೈ ಗೆ  ದುಡ್ಡು ಬಂದ ತಕ್ಷಣ ಕಣ್ಣಿಗೆ ಕಂಡ ಬಟ್ಟೆಗಳನ್ನು ತೆಗೆದುಕೊಂಡೆ. ಮುಂಬೈ ನ ಎಲ್ಲಾ ತರಹದ ತಿಂಡಿಗಳನ್ನು ತಿಂದೆ. ಚನ್ನಾಗಿ ವಾರಾಂತ್ಯ ಸುತ್ತುತ್ತಿದ್ದೆ. ಒಳ್ಳೆ ಸಂಸ್ಕಾರ ನೀಡಿದ ಕಾರಣ ನನಗೆ ಯಾವ ವ್ಯಸನಗಳು ಮೈಗಂಟಿಕೊಂಡಿಲ್ಲ. ಮನೆಯಿಂದ ಬರುವಾಗ ಅಮ್ಮ ಹೇಳಿದ ಮಾತು, “ ನಿನ್ನ ಸಂಬಳ ನಮಗೆ ಕೊಡೋದು ಬೇಡ. ಚನ್ನಾಗಿ ಉಳಿಸು” ಅಂದಿದ್ದರು. ಆದರೆ ನಾನು ಅಷ್ಟಾಗಿ ಉಳಿಸುವ ಜಾಯ ಮಾನದವನಾಗಿರಲಿಲ್ಲ. ಮೊದಲಿನಿಂದಲು ಇದೇ ವಾತಾವರಣದಲ್ಲೆ ಬೆಳೆದ ನನಗೆ ಕೈ ಬಿಚ್ಚಿ ಖರ್ಚು ಮಾಡಬೇಕು ಜೀವನವನ್ನು ಬಿಂದಾಸ್ ಆಗಿ ಕಳೆಯಬೇಕು ಅನ್ನೊ ಆಸೆ ಇತ್ತು.  ಯಾವ ಜಂಜಾಟವನ್ನು ಹಚ್ಚಿಕೊಳ್ಳದೆ ಒಬ್ಬನೆ ಬದುಕುವ ಆಸೆ ಹೊಂದಿರುವೆ.
ಈಗ ನನ್ನ ಈಗಿನ ಪ್ರಶ್ನೆ  ಅಮ್ಮನ ಒಂದೆ ಒತ್ತಾಯ ನನ್ನ ಮದುವೆ ಆಗು ಎಂದು. ಆದರೆ ನನಗೆ ಸುತಾರಾಃ ಇಷ್ಟ ಇಲ್ಲ. ಯಾಕೆ ಅಂತ ಅಮ್ಮನ ಬಳಿ ಹೇಳುವ ಹಾಗೆ ಇಲ್ಲ. ಅಪ್ಪ-ಅಮ್ಮನಿಗೆ ಅವರು ನಮ್ಮನ್ನು ಚನ್ನಾಗಿ ಬೆಳೆಸಿದ್ದಾರೆ ಎಂದು. ಆದರೆ ಅಮ್ಮ ನಮ್ಮ ಮನಸ್ಸಿನ ಆಸೆ ಅರ್ಥ ಮಾಡಿಕೊಂಡಿಲ್ಲ ಎಂದು. ಆದರೆ ನನಗೆ ಒಳ್ಳೆ ವಿದ್ಯೆ ಕೊಡಿಸಿದ ಕಾರಣ ಇವತ್ತು ಕೈ ತುಂಬಾ ಸಂಬಳ ಎಣಿಸುತ್ತಿದ್ದೆನೆ. ಅಪ್ಪ-ಅಮ್ಮ ನನ್ನ ಭವಿಷ್ಯಕ್ಕೆ ಮೋಸ ಮಾಡಿಲ್ಲ. ಆದರು ಎನೋ ಒಂದು ಅಸಮಾಧಾನ. ಇಷ್ಟು ಮಾಡಿದ ಅಪ್ಪ-ಅಮ್ಮ ನ ಮೇಲೆ ನನಗೆ ಏನೋ ಅಸಮಾಧಾನ ಆಗಿರುವಾಗ ಮುಂದೆ ನನ್ನ ಮಕ್ಕಳಿಗೂ ನಾನು ನನ್ನದೆ ದೃಷ್ಟಿಯಲ್ಲಿ ಬೆಳೆಸಿ ಅವರ ಆಸೆ ಏನು ಅಂತ ಅರ್ಥ ಮಾಡಿಕೊಳ್ಳದೆ ಅವರು ನನ್ನ ಮೇಲೆ ಇದೆ ಭಾವನೆ ಬೆಳೆಸಿಕೊಂಡರೆ?  ಕಟ್ಟಿಕೊಂಡ ಹೆಂಡತಿಹೆ ಇನ್ನೆನೋ ಆಸೆ ಇದ್ದು ಇನ್ನು ಅವಳ ಜೊತೆ ಹೊಂದಾಣಿಕೆ ಆಗದೆ ಇದ್ದರೆ? ಯಾಕೋ ಸ್ವತಂತ್ರ ಜೀವನ ನಡೆಸಬೇಕು ಅನ್ನೊ ಆಸೆ ನನ್ನದು. ಇದನ್ನು ಅಪ್ಪ-ಅಮ್ಮ ನ ಹತ್ತಿರ ಹೇಳಿಕೊಳ್ಳದೆ ಒದ್ದಾಡುತ್ತಿರುವೆ. ಆದರೆ ದಿನ ಅಮ್ಮ ನ ಪೋನ್ ನನ್ನ ಮದುವೆ ವಿಚಾರವಾಗಿ. ಎಷ್ಟು ದಿನ ಅಂತ ಮುಂದುಡಲಿ ಎಂದು ತಿಳಿಯುತ್ತಿಲ್ಲ.
(ಇದು ಒಂದು ನಿಜವಾದ ಕಥೆ. ನಮ್ಮ ಮನೆ ಪಕ್ಕದಲ್ಲಿ ಲಖನೌ ದವರು ಇದ್ದಾರೆ. ಇದು ಅವರ ಮನೆ ಕಥೆ. ಅವರು (ಹುಡುಗನ ಅಕ್ಕ) ಹೇಳಿದ ಕಥೆಯನ್ನು ನಾನು ನನ್ನದೆ ಶೈಲಿಯಲ್ಲಿ ಬರೆದಿರುವೆ. ನಿರೂಪಣೆ ಮಾಡುವುದರಲ್ಲಿ ಸ್ವಲ್ಪ ಕಷ್ಟ ಆಯಿತು. ಆದರು ಪ್ರಯತ್ನ ಪಟ್ಟಿರುವೆ.)

Friday, August 16, 2019

ಗೂಗಲ್ ಅಣ್ಣ ಮತ್ತು ಯು ಟ್ಯೂಬ್ ಅಕ್ಕ


                                   ಗೂಗಲ್ ಅಣ್ಣ ಮತ್ತು ಯು ಟ್ಯೂಬ್ ಅಕ್ಕ

ಅಪ್ಪ ನಮ್ಮನ್ನ ಪ್ರವಾಸಕ್ಕೆಂದು ವರ್ಷಕ್ಕೊಮ್ಮೆ ಕರೆದುಕೊಂಡು ಹೋಗ್ತಾ ಇದ್ರು. ನನ್ನ ನೆನಪಿನ ಪ್ರಕಾರ ಒಮ್ಮೆ ತಮಿಳುನಾಡಿನ ಯಾವುದೊ ದೇವಸ್ಥಾನಕ್ಕೆ ಹೋಗಿದ್ವಿ. ಅಲ್ಲಿಂದ ನಾವು ಅಲ್ಲೆ ಹತ್ತಿರ ಯಾವುದಾದರು ಹೋಟೆಲ್ ನಲ್ಲಿ ರೂಮ್ ಮಾಡಬೇಕಿತ್ತು. ನಮ್ಗೊ ತಮಿಳು ಬರಲ್ಲ, ಅಲ್ಲಿ ತಮಿಳು ಬಿಟ್ಟು ಬೇರೆ ಭಾಷೆ ಅಷ್ಟಾಗಿ ಬರಲ್ಲ. ಒಳ್ಳೆ ಮೂಖರ ಸಹವಾಸ ಆದಂತೆ ಆಯಿತು. ಒಟ್ಟಿನಲ್ಲಿ ಕೈ ಸನ್ನೆ ಮೂಖ ಬಾಷೆಯಲ್ಲಿ ನಮ್ಮ ತಮಿಳು ನಾಡಿನ ಪ್ರವಾಸ ಮುಗಿಸಿದ್ವಿ. ನನಗೆ ಇಂದು ಈ ವಿಷಯ ನೆನಪಿಗೆ ಬಂದಿದ್ದು ಗೂಗಲ್ ಮ್ಯಾಪ್ ನಿಂದ. ನೀವು ಈಗ ಎಲ್ಲೆ ಹೋಗಿ ಗೂಗಲ್ ಮ್ಯಾಪ್ ನಮ್ಮನ್ನು ಗೈಡ್ ಮಾಡುತ್ತದೆ. ಹತ್ತಿರದ ದಾರಿ, ಹೋಟೆಲ್, ಎಲ್ಲವನ್ನು ಗೂಗಲ್ ಅಣ್ಣ ನಮಗೆ ಗೈಡ್ ಮಾಡುತ್ತ ಹೋಗುತ್ತಾನೆ. ಈ ಗೂಗಲ್ ಅಣ್ಣ ಬಂದ ಕಾರಣ ನಾವು ಯಾವ ಊರಿಗೆ ಹೋದರು ಭಾಷೆಯ ಸಮಸ್ಯೆ ಬರುವುದಿಲ್ಲ. ಗೂಗಲ ಮ್ಯಾಪ್ ಹಾಕಿ ಊರು ಸುತ್ತಿ ಬರಬಹುದು. ಇದರ ಹೊರತಾಗಿ  ಗೂಗಲ್ ಅಣ್ಣನ ಹತ್ತಿರ ಏನೆ ಕೇಳಿ ಉತ್ತರ ಹುಡುಕಿ ಕೊಡುತ್ತಾನೆ. ಯಾವುದಕ್ಕು ಬೆಸರ ಪಡದೆ, ಸಿಡಿ-ಸಿಡಿ ಮಾಡದೆ ಎಷ್ಟೇ ಸಲ ಕೇಳಿದರು ಸಮಸ್ಯೆ ಇಲ್ಲ.
ಗೂಗಲ್ ಅಣ್ಣನ ಉಪಕಾರ ಇದೊಂದೆ ಅಲ್ಲ ಹಲವು. ಈ ಯು ಟ್ಯೂಬ್ ಅಕ್ಕಂದಿರ ಉಪಕಾರ ಇನ್ನು ದೊಡ್ಡದು. ಹೆಚ್ಚಿನ ಪಕ್ಷ ಈಗಿನ ಹೆಣ್ಣು ಮಕ್ಕಳಿಗೆ ಅಡಿಗೆ ಅಷ್ಟಾಗಿ ಕಲಿಸಿರುವುದಿಲ್ಲ. ಮದುವೆ ಆದ ಮೇಲೆ ಗಂಡನ ಮೇಲೆ ಪ್ರಯೋಗ ಮಾಡಬೇಕು. ಮೊದಲು ಪುಸ್ತಕಲ್ಲಿ ಓದಿ ಅಥವಾ ಅಮ್ಮನ ಹತ್ತಿರ ಡೈರಿಯಲ್ಲಿ ಬರೆದಿಟ್ಟುಕೊಂಡು ಅದನ್ನು ಓದಿ ಅಡಿಗೆ ಮಾಡುತ್ತಿದ್ದರು. ಆದರೆ ಈಗ ಹಾಗಲ್ಲ. ಅಡಿಗೆ ಮನೆಯಲ್ಲೆ ಮೊಬೈಲ್ ನಲ್ಲಿ ಯು ಟೂಬ್ ಹಚ್ಚಿಕೊಂಡು  ಅಡಿಗೆ ಮಾಡುವುದು ಸಹಜವಾಗಿದೆ. ಏನಾದರು ನೆಟ್ ಮದ್ಯದಲ್ಲಿ ಕೈ ಕೊಟ್ಟರೆ ಆ ದೇವರೆ ಗತಿ.
ಯು ಟ್ಯೂಬ್ ನಲ್ಲಿ ಅಡಿಗೆ ಚಾನಲ್ ಗೆನು ಬರ ಇಲ್ಲ. ಯಾವ ದೇಶದ ಮೂಲೆ-ಮೂಲೆಯ ಅಡಿಗೆಯನ್ನು ಮಾಡಿ ತೋರಿಸುತ್ತಾರೆ. ಇದನ್ನು ತಿನ್ನುವವರು ಮಾತ್ರ…….?
ಇಗಿನ ಕಾಲದವರಿಗೆ ಮಾತ್ರ ಈ ಯು ಟ್ಯೂಬ್ ಅಕ್ಕಂದಿರು ಮತ್ತು ಗೂಗಲ್ ಅಣ್ಣಂದಿರು ವರದಾನವೆ ಸರಿ. ಈಗಿನವರ ಎಷ್ಟೋ ಕಷ್ಟಗಳನ್ನು ಕಡಿಮೆ ಮಾಡಿವೆ. ನಮ್ಮ ಎಷ್ಟೊ ಹವ್ಯಾಸ, ಹೊಸ ವಿಷಯ  ಕಲಿಯುವುದರಲ್ಲಿ, ಇವರ ಪಾಲು ಇದೆ. ಈ ಯು ಟ್ಯೂಬ್  ಅಕ್ಕ- ಗೂಗಲ್ ಅಣ್ಣನಿಗೆ ನನ್ನದೊಂದು ಸಲಾಂ.

Sunday, August 4, 2019

ನಾಗರ ಪಂಚಮಿ ನಾಡಿಗೆ ದೊಡ್ಡದು….


                                  ನಾಗರ ಪಂಚಮಿ ನಾಡಿಗೆ ದೊಡ್ಡದು….

ನಿನ್ನೆ ಟಿ.ವಿ. ನೋಡ್ತಾ ಇದ್ದೆ. ಸುಬ್ರಮಣ್ಯ ದೇವಸ್ಥಾನದ ಬಗ್ಗೆ  ಮತ್ತು ನಾಗರ ಹಾವಿನ ಬಗ್ಗೆ ಯಾವುದೋ ಕಾರ್ಯಕ್ರಮ ಬರ್ತಾ ಇತ್ತು. ಆಗಲೇ ನೆನಪಾದದ್ದು ಓ ನಾಳೆ ನಾಗರ ಪಂಚಮಿ ಎಂದು. ಶ್ರಾವಣ ಮಾಸ ಶುರುವಾಯಿತೆಂದರೆ ಹಬ್ಬಗಳ ಸಾಲೆ-ಸಾಲು. ನಮಗೆ ಮರೆತು ಹೋದರು ಈ ಟಿ,ವಿ,ಯವರು ಒಳ್ಳೊಳ್ಳೆ ಕಾರ್ಯಕ್ರಮ ಮಾಡಿ ನೆನೆಪು ಮಾಡುತ್ತಾರೆ.
ನಮ್ಮೂರಲ್ಲಿ ಸಂಪ್ರಧಾಯವಾಗಿ ಎಲ್ಲಾ ಹಬ್ಬಗಳನ್ನು ಆಚರಿಸುತ್ತಾರೆ. ಆದರೆ ಯಾವ ಆಡಂಬರಗಳು ಇರುವುದಿಲ್ಲ. ಆ ಕಾಲದಲ್ಲಿ ಮನೆಯ ಹಿತ್ತಲಿನಲ್ಲಿ ಅಥವಾ ತೋಟದಲ್ಲಿ ದೊರಕುವ ಹೂವು-ಹಣ್ಣು ಗಳಿಂದ ಪೂಜೆ ಮಾಡುತ್ತಾರೆ. ಕೆಲವು ಮನೆ ಮತ್ತು ಊರುಗಳಲ್ಲಿ  ಕೆಲವು ಆಚರಣೆಯಲ್ಲಿ  ಸ್ವಲ್ಪ ವ್ಯತ್ಯಾಸ ಇದ್ದರು ಹೆಚ್ಚು-ಕಮ್ಮಿ  ಒಂದೇ ತರಹ ಆಚರಿಸುತ್ತಾರೆ.
ನಾವು ಚಿಕ್ಕವರಿದ್ದಾಗ ನಾಗರ ಪಂಚಮಿ ಬಂತು ಅಂದರೆ ಮೊದಲ ಮಾಡುವ ಕೆಲಸ ಮದರಂಗಿ ಸೊಪ್ಪು ತರುವುದು. ನಾಗರ ಪಂಚಮಿಗೆ ಮದರಂಗಿ ಹಚ್ಚಿಕೊಂಡರೆ ಹಾವು ಕಚ್ಚುವುದಿಲ್ಲ ಅಂತ ಅಜ್ಜಿ ಹೇಳಿದ ನೆನಪು. ಅದು ಅಲ್ಲದೆ ಮಾರನೆಯ ದಿನ ಶಾಲೆಯಲ್ಲಿ ಯಾರ ಕೈ ಮದರಂಗಿ ಚನ್ನಾಗಿ ಇದೆ ಎಂದು ನೋಡುವ ಹುಚ್ಚು. ನಾವು ಮದರಂಗಿ ಸೊಪ್ಪನ್ನು ಮನೆಯಲ್ಲಿ ಒರಳಲ್ಲಿ ರುಬ್ಬಿ ಅದರನ್ನು ಕೈಗೆ ಮತ್ತು ಉಗುರಿಗೆ ಹಚ್ಚಿಕೊಳ್ಳುತ್ತಿದ್ದೆವು. ಈಗ ಬರುವ ಕೋನ್ ಮದರಂಗಿಕಿಂತ  ಮನೆಯಲ್ಲಿ ಮಾಡಿದ ಮದರಂಗಿಯ ವಾಸನೆಯೆ ಬೇರೆ. ಅದು ಅಲ್ಲದೆ ಈ ಮದರಂಗಿ ತುಂಬಾ ದಿನ ಉಳಿಯುತ್ತಿತ್ತು ಮತ್ತು ಆ ಬಣ್ಣವೆ ಕಡು ಕೆಂಪಾಗಿ ನೋಡಲು ಚನ್ನಾಗಿ ಇರುತಿತ್ತು. ಈಗಲು ಮದರಂಗಿ ಅಂದರೆ ಒಳಕಲ್ಲಿನಲ್ಲಿ ಅಮ್ಮ ರುಬ್ಬಿದ ಮದರಂಗಿ ಮತ್ತು ಅದರ ವಾಸನೆಯೆ ನೆನಪಿಗೆ ಬರುವುದು.
ನಾಗರ ಪಂಚಮಿಯ ದಿನ ದೇವಸ್ಥಾನಕ್ಕೆ ಹೋಗುವ ಪದ್ದತಿ ಇಲ್ಲವಾಗಿತ್ತು. ನಮ್ಮ ಮನೆಯ ತೋಟದಲ್ಲಿ ನಾಗರ ಕಲ್ಲು ಇತ್ತು. ಆ ತೋಟಕ್ಕೆ ನಾಗರಕಾನು ಅಂತನೆ ಹೆಸರು. ನಾವು ಮತ್ತು ನಮ್ಮ ದೊಡ್ಡಪ್ಪನ ಮನೆಯವರೆಲ್ಲ ಅಲ್ಲೆ ಪೂಜೆ ಮಾಡುವುದು. ನಮ್ಮ ಕಡೆ ಹೆಚ್ಚಾಗಿ ಎಲ್ಲರ ಮನೆಯಲ್ಲಿ ಅಥವಾ ಊರಲ್ಲಿ ನಾಗರಕಲ್ಲು, ಚೌಡಿ ಕಟ್ಟೆ, ಅಶ್ವಥ್ ಕಟ್ಟೆ ಇದ್ದೆ ಇರುವುದು. ನಾಗರ ಪಂಚಮಿ ಮಳೆಗಾಲದಲ್ಲಿ ಬರುವ ಕಾರಣ ತೋಟಕ್ಕೆ ಹೋಗುವುದು ಕಷ್ಟವೆ. ಅದು ಅಲ್ಲದೆ ಉಂಬಳದ ಕಾಟ. ಇದಕ್ಕಾಗಿ ಪೂಜೆಗೆ ಹೋಗುವುದು ದೊಡ್ಡ ತಲೆನೋವೆ. ಆದರೆ ಅಪ್ಪನ ಹತ್ತಿರ ನೈವೆದ್ಯ ಮತ್ತು ಪೂಜೆ ಸಾಮಗ್ರಿ ಹಿಡಿದುಕೊಳ್ಳಲು ಆಗದ ಕಾರಣ ನಾನು ಮತ್ತು ಅಕ್ಕ ಅಪ್ಪನ ಜೊತೆ ಹೋಗುತ್ತಿದ್ದೆವು. ತಮ್ಮ ಜವಟೆ ಬಡಿಯುತ್ತಿದ್ದ. ಪೂಜೆ ಮಾಡುವಾಗ ಅಪ್ಪ ಯಾವಾಗಲು ಹೇಳುತ್ತಿದ್ದರು, “ಅಲ್ಲೆ ಇದ್ದ ಸಂಪಿಗೆ ಮರದಲ್ಲಿ ನಾಗರ ಹಾವಿದೆ ಅದು ನೋಡುತ್ತಾ ಇರುತ್ತದೆ ಎಂದು”. ಆದರೆ ಅದು ಯಾವಾಗಲು ನಮಗೆ ಕಾಣಿಸಲಿಲ್ಲ. ಆದರೆ ತೋಟದಲ್ಲಿ ಹಾವುಗಳಿರುವುದು ಸರ್ವೆಸಾಮಾನ್ಯ. ಕಾಲಿಗೆ ಉಂಬಳ ಹತ್ತಿಸಿಕೊಂಡು ಮಳೆಯಲ್ಲಿ ನೆನೆದು ಅಂತು ಪೂಜೆ ಮುಗಿಸಿ ಬರುತ್ತಿದ್ದೆವು. ಆಗ ಅದು ರಗಳೆ ಅನಿಸಿದರು ಈಗ ಅದು ನಮಗೆ ಸವಿ ನೆನಪು.
ನಾಗರ ಪಂಚಮಿಗೆ ಮಾಡುವ ಅಡುಗೆ ವಿಭಿನ್ನವಾಗಿತ್ತು. ನೈವೆದ್ಯಕ್ಕೆ ಉಪ್ಪಿಲ್ಲದೆ ಮಾಡಿದರೆ ನಾವು ತಿನ್ನುವಾಗ ಉಪ್ಪು ಖಾರ ಚನ್ನಾಗಿ ಹಾಕಿಕೊಂಡು ತಿನ್ನುತ್ತಿದ್ದೆವು. ಅರಿಶಿಣ ಎಲೆಯ ಕಡುಬು(ಪಾತೋಳಿ) ಅದನ್ನು ಹೆಚ್ಚಾಗಿ ಮಾಡುತ್ತಿದ್ದರು. ಅದು ಅಲ್ಲದೆ ಇನ್ನೊಂದು ಚಪ್ಪೆ ಹೋಳಿಗೆ ಅಂತ. ಇದು ಹೋಳಿಗೆಯ ಯಾವ ಲಕ್ಷಣನು ಹೊಂದಿಲ್ಲ. ಹೆಸರು ಮಾತ್ರ ಚಪ್ಪೆ ಹೋಳಿಗೆ. ಆದರೆ ಇದರ ರುಚಿ ಹೋಳಿಗೆಯ ಸಮಾನ ಅಂತಲೆ ಹೇಳಬಹುದು. ಇದನ್ನು ಸವತೆಕಾಯಿ ಮತ್ತು ಅಕ್ಕಿ ಹಿಟ್ಟನ್ನು ರುಬ್ಬಿ ಈ ರುಬ್ಬಿದ ಹಿಟ್ಟನ್ನು ಬಾಳೆ ಎಲೆಯಲ್ಲಿ ಹಚ್ಚಿ ಅದನ್ನು ಒಲೆಯಲ್ಲೆ ಬೇಯಿಸುತ್ತಾರೆ. ಇದು ಒಳ್ಳೆ ಬಾಳೆ ಎಲೆಯ ಘಮ ಹೀರಿಕೊಳ್ಳುವುದಕ್ಕೊ ಎನೊ ಇದರ ರುಚಿ ಅತ್ಯಧ್ಬುತ. ಮೊದಲೆ ಹೇಳಿದ ಹಾಗೆ ಬೇರೆ-ಬೇರೆ ಊರುಗಳಲ್ಲಿ ಬೇರೆ-ಬೇರೆ ತರ ಆಚರಿಸುತ್ತಾರೆ. ನಮ್ಮೂರಲ್ಲಿ ಅಂದರೆ ನನ್ನ ತವರು ಮನೆಯಲ್ಲಿ ಇದನ್ನು ಮಾಡೆ ಮಾಡುತ್ತಿದ್ದರು. ನಮ್ಮ ಮನೆಯಲ್ಲಿ ತಿಂದಿದ್ದು ಸಾಲ ಎಂದು ಮದ್ಯಾನ್ನದ ಮೇಲೆ ಅಕ್ಕ-ಪಕ್ಕದ ಮನೆಗೆ ಹೋಗಿ ರುಚಿ ನೋಡಿದ ಧಾಖಲೆಯು ಇದೆ. ಇದು ನನಗೆ ಎಷ್ಟು ಇಷ್ಟ ಆಗಿತ್ತೆಂದರೆ ನಾನು ಬಸುರಿ ಇದ್ದಾಗ ಚಪ್ಪೆ ಹೋಳಿಗೆ ತಿನ್ನುವ ಆಸೆ ಆಗಿ ಅಮ್ಮನ ಹತ್ತಿರ ಹೇಳಿ ಮಾಡಿಸಿಕೊಂಡಿದ್ದೆ.
ನಾಗರ ಪಂಚಮಿಯ ಇನ್ನೊಂದು ವಿಶೇಷ ಅಂದರೆ ಹೊದ್ಲು(ಅರಳು) ಮತ್ತು ಹಲಸಿನ ಬೆಳೆಯನ್ನು ಬಿರುವುದು. ಹಲಸಿನ ಹಣ್ಣಿನ ಬೆಳೆಯನ್ನು ಬಿಸಿಲಿನಲ್ಲಿ ಒಣಗಿಸಿ ಇಟ್ಟಿರುತ್ತಿದ್ದರು. ಅದನ್ನು ಕೆಂಡದಲ್ಲಿ ಸುಟ್ಟಿ ನಾಗರ ಕಲ್ಲಿಗೆ ನೈವೇದ್ಯ ಮಾಡುತ್ತಿದ್ದೆವು. ಆ ನೈವೇದ್ಯ ಮಾಡಿದ ಹೊದ್ಲು ಮತ್ತು ಬೆಳೆಯನ್ನು ಮನೆಯ ಪ್ರಧಾನ ಬಾಗಿಲ ಮುಂದೆ ಮತ್ತು  ದೇವರ ಮನೆಯಲ್ಲಿ ಬೀರುತ್ತಿದ್ದೆವು. ಆ ಬೀರಿದ ಹೊದ್ಲು ಮತ್ತು ಬೆಳೆಯನ್ನು ನಾವು ತಿನ್ನುತ್ತಿದ್ದೆವು. ಅಮ್ಮ ಕಸ ಆಗುವುದು ಶಾಸ್ತ್ರಕ್ಕೆ ಬಿರಿ ಎನ್ನುತ್ತಿದ್ದರು. ಆದ್ರೆ ನಾವು ಚನ್ನಾಗಿ ಬೀರುತ್ತಿದ್ದೆವು. ಹಲಸಿನ ಬೆಳೆ ಖಾಲಿಯಾಗುತ್ತಿತ್ತು. ಹೊದ್ಲು ಹಾಗೆ ಉಳಿಯುತ್ತಿತ್ತು.
ಇನ್ನು ಮದ್ಯಾನ್ನ ಜೋಕಾಲಿ ಕಟ್ಟುವ ಸಂಬ್ರಮ. ಅದು ಯಾಕೆ ಅನ್ನೊದು ಗೊತ್ತಿಲ್ಲ ನಾಗರ ಪಂಚಮಿಯ ದಿನ ಜೋಕಾಲಿ ಕಟ್ಟಿ ಆಡುತ್ತಿದ್ದೆವು. ಹಳೆ ಬಾವಿ ಹಗ್ಗದಲ್ಲಿ ಅಂಗಳದಲ್ಲಿ ಜೋಕಾಲಿ ಕಟ್ಟಿ ಅದಕ್ಕೆ ಕುಳಿತುಕೊಳ್ಳಲು ಗೋಣಿಚೀಲ ಹಾಕಿ  ಜೋಕಾಲಿ ಅಟ ಆಡಿದರೆ ಏನೋ ಖುಷಿ. ಈಗ ಬಾಲ್ಕನಿಯಲ್ಲಿ ಬಿದಿರಿನ ಜೋಕಾಲಿಯಲ್ಲಿ ಕುಳಿತುಕೊಂಡರೆ ಆರಾಃ ಆಗಬಹುದೆ ಹೊರತು, ಆಗ ಕುಂಡೆ ನೋಯಿಸಿಕೊಂಡು ಹಗ್ಗದಲ್ಲಿ ಕುಳಿತು ಜೋಕಾಲಿ ಜೀಕುವುದೆ ಖುಷಿ ಕೊಡುತ್ತಿತ್ತು.
ನಾಳೆ ನಾಗರ ಪಂಚಮಿ ಅಂದ ತಕ್ಷಣ ಯಾಕೊ ನಾವು ಚಿಕ್ಕವರಿದ್ದಾಗ ಆಚರಿಸುವ ನೆನಪು ಆಯಿತು. ಈಗ ನಮ್ಮ ಅಕ್ಕ-ಪಕ್ಕದ ಮನೆಯವರು ಆಚರಿಸುವಂತೆ ನನಗೆ ಆಚರಿಸಲು ಬರುವುದಿಲ್ಲ. ಸುಮ್ಮನೆ ಮನೆಯಲ್ಲಿ ಅರಿಶಿಣ ಏಲೆಯ ಕಡುಬು ಮಾಡಿ  ನಾಗಪ್ಪನಿಗೆ ನೈವೇದ್ಯ ಮಾಡುತ್ತೇನೆ. ಇದರ ಜೊತೆ  ಹಳೆಯ ನೆನಪು ನೆನೆಯುತ್ತ, ನಿಮ್ಮೊಂದಿಗೆ ಮತ್ತು ಮನೆಯವರ ಹತ್ತಿರ ಹಂಚಿಕೊಳ್ಳುತ್ತ ಆಚರಿಸುವೆ.
ಏನೆ ಆಗಲಿ ಆ ನಾಗಪ್ಪ ನಮ್ಮೆಲ್ಲರನ್ನು ಕಾಪಾಡಲಿ ಎಂದು ಕೇಳಿಕೊಳ್ಳುತ್ತಾ, ನಿಮ್ಮೆಲ್ಲರಿಗೂ ನಾಗರ ಪಂಚಮಿಯ ಶುಭಾಶಯಗಳು.