Saturday, April 6, 2019

ಪ್ಯಾಟೆ ಸ್ಕೂಲ್ ಗಮ್ಮತ್ತು…..


                                       ಪ್ಯಾಟೆ ಸ್ಕೂಲ್ ಗಮ್ಮತ್ತು…..

ರುಕ್ಮಿಣಿ ಪೇಟೆ ಹತ್ತಿರದ ಊರಿನವಳಾದ್ದರಿಂದ ಅಲ್ಲೆ ಪೇಟೆಗೆ ಹತ್ತಿರದ ಒಂದು ಸರಕಾರಿ ಶಾಲೆಗೆ ಹೋಗುತ್ತಿದ್ದಳು.ನಾಲ್ಕನೇ ತರಗತಿ ಆದರು ತುಂಬಾ ಚೂಟಿ ಆಗಿದ್ದಳು.  ಯಾವಾಗಲು ವಟವಟ ಅನ್ನೋ ರುಕ್ಮಿಣಿ ಎಲ್ಲರ ತಲೆ ತಿನ್ನುತ್ತಾ ತನ್ನದೆ ಏನೋ ಒಂದು ಕಥೆ ಹೇಳುತ್ತಿದ್ದಳು. ಆದರೆ ಎಲ್ಲರ ಕೈ ಮುದ್ದು ಆಗಿದ್ದಳು. ಅವಳನ್ನು ರೇಗಿಸೋದು, ಅವಳಿಗಾಗಿ ತರಹ-ತರಹದ ಹೆಸರಿಡುವುದು ಅಂದರೆ ಎಲ್ಲರಿಗೂ ಬಹು ಪ್ರೀತಿ.
ಬೆಸಿಗೆ ರಜೆ ಬಂತೆಂದರೆ ಇಗಿನ ತರ ಯಾವ ಸಮ್ಮರ್ ಕ್ಯಾಂಪ್ ಇಲ್ಲ, ನೆಂಟರ ಮನೆಯಲ್ಲಿಯೆ ಕ್ಯಾಂಪ್. ಪ್ರಕೃತಿಯೆ ಟೀಚರ್. ರುಕ್ಮಿಣಿಗೆ ಬೆಸಿಗೆ ರಜೆ ಬಂತೆಂದರೆ ಮನೆಯಲ್ಲಿ ಕಾಲು ನಿಲ್ಲುವುದಿಲ್ಲ. ಸ್ವಲ್ಪ ದೂರದ ಅಜ್ಜನ ಮನೆಗೆ ಹೋಗುತ್ತಿದ್ದಳು. ಅಲ್ಲಿ ಅವಳ ವಾರಗೆಯ ಹುಡುಗರು ಇದ್ದರು. ಅದು ಅಲ್ಲದೆ ಅಲ್ಲಿನ ಗದ್ದೆ ಮತ್ತು  ಹೊಳೆ ಬಹಳ ಪ್ರೀಯವಾಗಿತ್ತು.
ಬೆಸಿಗೆಯಲ್ಲಿ ಗದ್ದೆಗೆ ನೀರು ಬಿಡುವುದು ಮಕ್ಕಳಿಗೆ ಬಹು ಪ್ರೀತಿ, ಗದ್ದೆಯಲ್ಲಿ ಮಗೆಕಾಯಿ ಮತ್ತು ಇತರೆ ಬೆಸಿಗೆ ತರಕಾರಿಗಳನ್ನು ಹಾಕುತ್ತಿದ್ದರು. ಅವುಗಳಿಗೆ ನೀರು ಬಿಟ್ಟು ದಿನ ಕಲ್ಲಂಗಡಿ ಅಥವಾ ಇನ್ನು ಯಾವುದಾದರು ತರಕಾರಿ ಎಷ್ಟು ದೊಡ್ಡವಾಯಿತು ಯಾವಾಗ ಅದನ್ನು ಕೊಯ್ಯಬಹುದು ಎಂದು ಲೆಕ್ಕಹಾಕಿ ಪುನಃ ಅದರ ಮೇಲೆ ಹುಲ್ಲು ಮುಚ್ಚಿಡುವುದು.
ರುಕ್ಮಿಣಿಗೆ ಮೊದಲಿನಿಂದಲು ಮಾತು, ಜನರ ಒಡನಾಟ ಪ್ರೀತಿ ಆದ ಕಾರಣ ಯಾವಾಗಲು ಅವಳಿದ್ದಲ್ಲಿ ಒಂದು ಪುಟ್ಟ ಗ್ಯಾಂಗ್ ಇದ್ದೆ ಇರುತ್ತಿತ್ತು. ಅಜ್ಜನ ಮನೆಯ ಊರ ಮಕ್ಕಳೆಲ್ಲ ರುಕ್ಮಿಣಿ ಬಂದಾಗ ಇವಳ ಹಿಂದೆ ಇರುತ್ತಿದ್ದರು. ದಿನ ಬೆಸಿಗೆಯಲ್ಲಿ ಸಿಗುವ ಹಣ್ಣುಗಳನ್ನು ಕೊಯ್ಯಲು ಹೋಗುತ್ತಿದ್ದರು. ಅದು ಅಲ್ಲದೆ ಬೆಸಿಗೆಯಲ್ಲಿ ಮಾವಿನ ಹಣ್ಣಿನ ಸೀಸನ್ ಆದ ಕಾರಣ ತೋಟದಲ್ಲಿ ಬೀಳುವ ಮಾವಿನ ಹಣ್ಣನ್ನು ಆರಿಸಿಕೊಂಡು ಮನೆಗೆ ತಂದು ಕೊಡಬೇಕಾಗಿತ್ತು. ಇದರಿಂದ ಮನೆಯಲ್ಲಿ ಏನಾದರು ಪದಾರ್ಥಗಳನ್ನು ಮಾಡುತ್ತಿದ್ದರು.
ಒಮ್ಮೆ ದತ್ತರಾಜ ತಮ್ಮ ಶಾಲೆಯ ಹಿಂದಿನ ಮಾವಿನ ಮರದಲ್ಲಿ ಹಣ್ಣುಗಳು ತುಂಬಾ ಬಿಳುತ್ತಿವೆ ನಾಳೆ ಎಲ್ಲ ಹೋಗಿ ಆರಿಸಿಕೊಡು ಬರುವುದಾಗಿ ಹೇಳಿದ. ಇದಕ್ಕೆ ರುಕ್ಮಿಣಿಯು ಖುಶಿಯಿಂದ ಒಪ್ಪಿದಳು. ಇವಳ ಜೊತೆ ರೂಪ. ಅರುಣ,ಕವಿತಾ,ಪ್ರಸನ್ನ ಎಲ್ಲ ಅವರ ಶಾಲೆಯ ಹಿಂದಿನ ಮಾವಿನ ಮರಕ್ಕೆ ದಾಳಿ ಇಟ್ಟರು. ಶಾಲೆಯು  ಗದ್ದೆಯ ಕೊನೆಯಲ್ಲಿ ಇತ್ತು. ಪ್ರಶಾಂತವಾದ ವಾತಾವರಣ. ಬಯಲಾದ ಜಾಗ. ಅಲ್ಲೆ ಪಕ್ಕದಲ್ಲಿ ಒಂದು ಸಣ್ಣ ಕೆರೆ. ಅಲ್ಲಿಂದನೆ ಗದ್ದೆಗೆ ನೀರಿನ ವ್ಯವಸ್ಥೆ ಮಾಡಿದ್ದರು. ಸುತ್ತಲು ತರಹ-ತರಹದ ಮರಗಳು. ಬೆಸಿಗೆಯಲ್ಲು ತಂಪಾದ ವಾತಾವರಣ. ಆ ಶಾಲೆಯ ವಾತವರಣ ನೋಡಿ ರುಕ್ಮಿಣಿ ದಂಗಾದಳು. ತನ್ನ ಶಾಲೆ ರಸ್ತೆಯ ಪಕ್ಕದಲ್ಲೆ ಯಾವಗಲು ಮುಖ್ಯ ರಸ್ತೆಯ ವಾಹನಗಳ ಶಬ್ದ ದಿಂದ ಗಿಜಿಗುಡುವುದು ನೆನಪಾಯಿತು. ಇಲ್ಲಿನ ಶಾಲೆಯ ವಾತವರಣ ನೋಡಿ ಸ್ವಲ್ಪ ಹೊಟ್ಟೆ ಕಿಚ್ಚು ಶುರುವಾಯಿತು.
ದತ್ತರಾಜ ಅಂದ ಹಾಗೆ ಒಳ್ಳೆ ಮಾವಿನ ಹಣ್ಣುಗಳು ಇದ್ದವು. ಎಲ್ಲಾ ಸೇರಿ ಹಣ್ಣುಗಳನ್ನು ಆರಿಸಿಕೊಳ್ಳುವಾಗ ರೂಪಾ, “ಇಷ್ಟು ಒಳ್ಳೆ ಹಣ್ಣು ಇಲ್ಲಿ ಬಿಳ್ತಾ ಇದೆ ಅಂತ ನನ್ಗೆ ಗೊತ್ತೆ ಇರ್ಲಿಲ್ಲ” ಅಂತ ಹೇಳಿದಳು. ಆಗ ದತ್ತರಾಜ, “ಈ ಮರಕ್ಕೆ ಪುಟ್ಟ-ಪುಟ್ಟ ಕಾಯಿ ಬಂದಿದ್ದು ನಾನ್ ನೋಡಿದ್ದೀನಿ. ಅದಿಕ್ಕೆ ನಾನು ನಿಮ್ಮ್ ಇಲ್ಲಿಗೆ ಬರೋದಕ್ಕೆ ಹೇಳಿದ್ದು” ಅಂತ ಹೇಳಿದ. ಆಗ ರುಕ್ಮಿಣಿಯ ಹೊರತಾಗಿ ಬಾಕಿ ಮಕ್ಕಳು ಅವರವರೆ ಮಾತಾಡಿಕೊಂಡರು. ರೂಪಾ ಹೇಳಿದಳು,” ಶಾಲೆಯ ಬಿಡುವಿನ ಸಮಯದಲ್ಲಿ ಸೀಬೆಕಾಯಿ ಕೀಳೋ ಜೊತೆಗೆ ಮಾವಿನ ಹಣ್ಣನ್ನು ಕಿತ್ತು ತಿನ್ನಬಹುದು” ಅಂತ ಹೇಳಿದಳು.  ಆಗ ಅರುಣ ಹೇಳಿದಳು, “ಅಯ್ಯೊ ಹಣ್ಣು ಆಗೊ ತನಕ ಯಾರ್ ಕಾಯ್ತಾ ಇರ್ತಾರೆ,  ಮಾವಿನ ಪುಟ್ಟ ಕಾಯಿಗೆ  ಮನೆಯಿಂದ ಉಪ್ಪು ಖಾರ ಮಾಡಿಕೊಂಡು ಇಲ್ಲಿ ತಿಂದ್ರೆ ಆಯ್ತು. ಶಾಲೆ ಬಿಟ್ಟ ಮೇಲೆ ಆ ಕೆರೆದಂಡೆ ಮೇಲೆ ಸುಮ್ನೆ ಕೂತ್ ಬರ್ತ್ತಿದ್ವಿ. ಇನ್ನು ಮಾವಿನ ಕಾಯಿ ಪಾರ್ಟಿ ಮಾಡೋಣ” ಅಂತ ಉತ್ಸಾಹದಲ್ಲಿ ಹೇಳಿದಳು. ಎಲ್ಲರು ಅವಳು ಹೇಳಿದ್ದೆ ಸರಿ ಅಂತ ಹೇಳಿದರು. ಆಗ ದತ್ತರಾಜ ರುಕ್ಮಿಣಿಯ ಬಳಿ ಕೇಳಿದ, “ ಏಯ್, ನಿಮ್ ಶಾಲೆ ಹತ್ರ  ಯಾವ ಮರ ಇದೆ. ನೀವು ಶಾಲೆ ಬಿಟ್ಟ್ ಮೇಲ್ ಏನ್ ಮಾಡ್ತೀರಾ?” ಅಂತ ಇವಳ ಬಳಿ ಕೇಳಿದ. ಆಗ ರುಕ್ಮಿಣಿಗೆ ಇವಳ ಶಾಲೆಯ ಬಗ್ಗೆ ಏನು ಹೇಳಿಕೊಳ್ಳುವುದು ಅಂತ ತಿಳಿಯಲಿಲ್ಲ. ಇಲ್ಲಿನ ಶಾಲೆಯ ಒಂದ್ ಅಂಶನು ಅವಳ ಶಾಲೆಯ ಬಳಿ ಇಲ್ಲ. ಆದರೆ ಇವರ ಎದುರು ತೆಪ್ಪಗೆ ಇರುವ ಜಾಯ್ ಮಾನ ಅವಳದ್ದಲ್ಲ. ಬೇಕಂತನೆ ಹೊಟ್ಟೆ ಉರಿಸಲು ತಮ್ಮ ಶಾಲೆಯ ಬಳಿ ಕರೆ ತಂದಿದ್ದಾರೆ, ಅದಕ್ಕಾಗೆ ತನ್ನ ಶಾಲೆಯ ಸುದ್ದಿ ಕೇಳ್ತಾ ಇರೋದು ಅಂತ ತಿಳಿದು ತಾನು ಇವರ ಹೊಟ್ಟೆ ಉರಿಸ ಬೇಕು ಅಂತ ತನ್ನ ಶಾಲೆಯ ಬಗ್ಗೆ ರೈಲ್ ಹೊಡಿಯೊಕ್ ಶುರು ಮಾಡಿದಳು.
“ಅಯ್ಯೊ..ನಮ್ ಶಾಲೆ ಬಗ್ಗೆ ಏನ್ ಕೇಳ್ತಿರಾ. ನೀವ್ ಇಲ್ಲಿ ಮಾವಿನ ಹಣ್ಣು ನೀವೆ ಆರಿಸಿ ತಿಂದರೆ ನಮ್ ಶಾಲೆಲಿ ನಮ್ಗೆ ಜ್ಯೂಸ್ ತಂದ್ ಕೊಡ್ತಾರೆ. ನಾವ್ ಮನೆಯಿಂದ ನೀರಿನ ಬಾಟೆಲ್ ತಗೊಂಡ್ ಬರಲ್ಲ. ನಮ್ಗೆ ನೀರದಿಕೆ ಆದಾಗ ಜ್ಯೂಸ್ ಕೊಡ್ತಾರೆ. ಒಂದ್-ಒಂದ್ ದಿನ ಐಸ್ ಕ್ರೀಮ್ ಬೇರೆ ಕೊಡ್ತಾರೆ” ಅಂತ ಹೇಳಿದಳು. ಜ್ಯೂಸ್ ಮತ್ತು ಐಸ್ ಕ್ರೀಮ್ ಹೇಳಿದ್ದೆ-ಹೇಳಿದ್ದು ಎಲ್ಲಾ ಕಣ್ಣು ಬಾಯಿ ಬಿಟ್ಟು ಇವಳ ಮಾತು ಕೇಳಿದರು. ಅರಣು ಸ್ವಲ್ಪ ಬೆಸರದಲ್ಲಿ, “ನಮ್ಗೆ ಅಪ್ಪ-ಅಮ್ಮ ಕೇಳಿದ್ರು ಜ್ಯೂಸ್ ಮತ್ತೆ ಐಸ್ ಕ್ರೀಮ್ ತೆಕ್ಕೊಡಲ್ಲ. ನಿಮ್ಗೆ ಶಾಲೆಲಿ ಅಂದ್ನಲ್ಲ ಕೊಡ್ತಾರಾ..? “ ಅಂತ ಕೇಳಿದಳು. ಆಗ ದತ್ತರಾಜ “ ಅವಳು ಹೋಗೋದ್ ಪೇಟೆ ಶಾಲೆ ಕೊಡ್ತಾರೆನೋ. ಅವ್ರ ಶಾಲೆ ಹತ್ತಿರ ಒಂದ್ ಅಂಗಡಿ ಇದೆ. ಅಲ್ಲಿ ಅಪ್ಪ ಒಂದ್ ದಿನ ಐಸ್ ಕ್ಯಾಂಡಿ ತೆಕ್ಕೊಟ್ಟಿದ್ರು.” ಅಂತ ಹೇಳಿದ. ಆಗ ರುಕ್ಮಿಣಿ  “ಅದೇ ಅಂಗಡಿಯಿಂದನೆ ನಮ್ಗೆ ಜ್ಯೂಸ್ ಮತ್ತು ಐಸ್ ಕ್ರೀಮ್ ನಮ್ ಶಾಲೆಗೆ ಬರೋದು” ಅಂತ ಹೇಳಿದಳು. ಆಗ ರೂಪ , “ಮತ್ತ್ ನಿಮ್ ಶಾಲೆಲಿ ಮತ್ತೀನ್ನೇನ್ ಇದೆ” ಅಂತ ಕೇಳಿದಳು. ಎಲ್ಲ ಮಾತಾಡುತ್ತ ಬಂದು ಶಾಲೆಯ ಮೆಟ್ಟಿಲ ಮೇಲೆ ಕುಳಿತರು. ರುಕ್ಮಿಣಿ ಇವರು ತಮ್ಮ ಶಾಲೆಯ ಬಗ್ಗೆ ಹೇಳೊದು ನಂಬುತ್ತಾರೆ ಅಂತ ತಿಳಿದು ತನ್ನ ಶಾಲೆಯ ಬಗ್ಗೆ ಒಳ್ಳೆ ಕಥೆನೆ ಶುರು ಮಾಡಿದಳು. “ನೋಡಿ ನಮ್ ಶಾಲೆಲಿ ಇಲ್ಲಿ ತರ ಸಣ್ಣ ಬೆಂಚಿನ ಮೇಲೆ ನಾವ್ ಕುಳಿತು ಕೊಳ್ಳಲ್ಲ. ನಮ್ಗೆ ಅಂತ ಸೋಫಾ ಸೇಟ್ ಇದೆ. ಅದ್ರ ಮೇಲ್ ಕುಳಿತ್ರೆ ಅಕ್ಕುತ್ತೆ. ಅಷ್ಟು ಮೆತ್ತಗೆ ಇದೆ. ನಮ್ ಶಾಲೆಲಿ ಟಿ.ವಿ. ಬೇರೆ ಇದೆ. ವಾರಕ್ಕೊಮ್ಮೆ ಸಿನಿಮಾ ತೋರ್ಸ್ತಾರೆ. ಶಾಲೆ ಹಿಂದೆ ಜೋಕಾಲಿ, ಜಾರ್ ಬಂಡಿ ಎಲ್ಲಾ ಇದೆ. ನಾವ್ ಯಾವಾಗ್ ಬೇಕೋ ಆವಾಗ್ ಆಟ ಆಡ್ಬಹುದು.” ಅಂತ ಹೇಳಿದಳು.
ಸತ್ಯ ತಲೆ ಮೇಲೆ ಹೊಡೆದ ಹಾಗೆ ಹೇಳಿದ ರುಕ್ಮಿಣಿಯ ಮಾತು ಬಾಕಿ ಮಕ್ಕಳಲ್ಲಿ ತಮ್ಮ ಶಾಲೆಯ ಬಗ್ಗೆ ಕೀಳರಿಮೆ ಶುರುವಾಯಿತು. ತಾವು ಜಾರ್ ಬಂಡಿ ಮತ್ತು ಜೋಕಾಲಿ ವರ್ಷಕ್ಕೊಮ್ಮೆನು ಆಟ ಆಡ್ತಿವೋ ಇಲ್ಲವೋ ಅಂತ ಹೇಳಿಕೊಂಡರು. ಇನ್ನು ಐಸ್ ಕ್ರೀಮ್ ಮತ್ತು ಜ್ಯೂಸ್ ಪೇಟೆಗೆ ಹೋದ್ರೆ ಅಪರೂಪಕ್ಕೊಮ್ಮೆ ಸಿಕ್ಕಿದ್ರೆ ಸಿಕ್ಕಿತು ಇಲ್ಲ ಅಂದ್ರೆ ಇನ್ನೊಂದು ದಿನ ಅಂತ ಮನೆಗೆ ಕರೆದುಕೊಂಡು ಬರ್ತಾರೆ ಅಂತ ಹೇಳಿಕೊಂಡರು. ತಮ್ಮಲ್ಲೆ ತಾವು ಕೂಡ ಪೇಟೆ ಶಾಲೆಗೆ ಹೋಗ ಬೇಕು ಅಂತ ಅಂದುಕೊಂಡು ಮನೆ ಕಡೆ ನಡೆದರು.
ಇದಾದ ಮಾರನೆ ದಿನ ರುಕ್ಮಿಣಿ ತನ್ನ ಮನೆಗೆ ಹೋದಳು. ಆದರೆ ಇವಳು ತಲೆಯಲ್ಲಿ ಬಿಟ್ಟ ಹುಳ ಕೆಲಸ ಮಾಡಲು ಶುರು ಮಾಡಿತು.
ಇದಾದ ಹದಿನೈದು ದಿನಕ್ಕೆ ಒಂದು ಕಾರ್ಯಕ್ರಮಕ್ಕೆ ರುಕ್ಮಿಣಿ ತನ್ನ ಅಮ್ಮನ ಜೊತೆ ಹೊಗಿದ್ದಳು. ಅಲ್ಲಿ ದತ್ತರಾಜನ ಅಣ್ಣ ನಾಗರಾಜ ಬಂದಿದ್ದ. ರುಕ್ಮಿಣಿಯ ನೋಡಿದ್ದೆ “ಏನೇ ಚನ್ನಾಗಿ ನಿಮ್ ಸ್ಕೂಲ್ ಬಗ್ಗೆ ರೈಲ್ ಬಿಟ್ಟಿದೀಯಾ? ಅಲ್ಲಿ ನಿನ್ನ ಗ್ಯಾಂಗ್ ನವರೆಲ್ಲ ನಾವ್ ರುಕ್ಮಿಣಿ ಹೋಗೋ ಶಾಲೆಗೆ ಹೋಗ್ತಿವಿ ಅಂತ ಕೂತಿದ್ದಾರೆ” ಅಂತ ಹೇಳಿದ. ಆಗ ರುಕ್ಮಿಣಿಗೆ ತಾನು ಹೇಳಿದ್ದು ನಾಗರಾಜಣ್ಣನಿಗೆ ಇವರು ಹೇಳಿರುವುದು ತಿಳಿತು. ಹೇಗಾದ್ರು ಜಾರಿಕೊಳ್ಳ ಬೇಕು ಅಂತ,” ನಾನೇನ್ ರೈಲು ಬಿಟ್ಟಿಲ್ಲ. ನಮ್ ಶಾಲೆಲಿ ಇದ್ದದ್ದು ಹೇಳಿದೆ” ಅಂದಳು. ಆಗ ನಾಗರಾಜ “ಏನು ನಿಮ್ ಶಾಲೆಲಿ ಇರೋದಾ…ಸುಮ್ನಿರು ನನ್ನ ಹತ್ತನೆ ಕ್ಲಾಸ್ ಪರಿಕ್ಷೆ ಸೆನ್ಟರ್ ಅಲ್ಲೆ ಆಗಿತ್ತು. ನೆಟ್ಟಗೆ ಕೂರಲು ಆಗಲ್ಲ. ಸೊಳ್ಳೆ ಕಾಟ ಮೇನ್ ರೋಡ್ ವಾಹನಗಳ ಶಬ್ದ. ಎಂಟ್ ದಿನಕ್ಕೆ ತಲೆ ಚಿಟ್ಟು ಹಿಡಿತು. ನೆಟ್ಟಗೆ ಕುಡಿಯಲು ನೀರಿಲ್ಲ. ಇನ್ನು ಜ್ಯೂಸ್ ಮತ್ತೆ ಐಸ್ ಕ್ರೀಮ್ ಬೇರೆ ಕೆಡು. ನೀನ್ ಹೇಳಿದ ಮಾತಿಗೆ ಅವರಲ್ಲ ತಾವು ತಮ್ಮ ಊರಿನ್  ಶಾಲೆಗೆ ಹೋಗಲ್ಲ ಪೇಟೆ ಶಾಲೆಗೆ ಹೋಗ್ತಿವಿ ಅಂತ  ಹಠ ಮಾಡ್ತಾ ಇದ್ದಾರೆ” ಅಂತ ಹೇಳಿದ. ಆಗ ರುಕ್ಮಿಣಿಗೆ ಏನ್ ಹೇಳೋಕು ತೋಚಲಿಲ್ಲ. ಅಲ್ಲೆ ಇದ್ದ ರೌಕ್ಮಿಣಿಯ ಅಮ್ಮ,” ಇವಳಿಗೆ ಬಾಯಿ ತಡೆಯಲ್ಲ. ಹಿಂದೆ-ಮುಂದೆ ಯೋಚನೆ ಮಾಡ್ದೆ ಏನಾದ್ರು ಹೇಳ್ತಾಳೆ. ಆ ಶಾಲೆ ಎಷ್ಟು ಚಂದ ಅಂತ ನನ್ಗೆ ಗೊತ್ತು. ಅದು ನಾನ್ ಕಲಿತ ಶಾಲೆನು. ಅಲ್ಲಿನ ಪರಿಸರ ದುಡ್ಡು ಕೊಟ್ಟರು ಸಿಗಲ್ಲ” ಅಂತ ಹೇಳಿದರು.
ಆಗ ರುಕ್ಮಿಣಿಗೆ ತಾನು ಅವರ ಬಳಿ ಸುಳ್ಳು ಹೇಳಬಾರದಿತ್ತು ಅಂತ ಅನಿಸಿತು. ಪಾಪ ಅವರ ಶಾಲೆ ಎಷ್ಟು ಚಂದ ಇದೆ. ಸುಮ್ಮನೆ ತನ್ನ ಪೇಟೆ ಶಾಲೆಯ ಬಗ್ಗೆ ಸುಳ್ಳು ಹೇಳಿ ಅವರಿಗೆ ಬೇರೆ ಶಾಲೆಗೆ ಹೊಗುವ ತರ ಮಾಡಿದೆ ಅಂತ ಪಶ್ಚಾತಾಪ ಆಯಿತು.  ಇನ್ನಾದ್ರು ತನ್ನ ಸ್ವಭಾವ ಬದಲಿಸಿಕೊಳ್ಳುವ ನಿರ್ಧಾರ ಮಾಡಿದಳು.

No comments: