Thursday, April 4, 2019

ಕೆಸರಲ್ಲಿ ಹುಟ್ಟಿದ ಕಮಲ


                                             ಕೆಸರಲ್ಲಿ ಹುಟ್ಟಿದ ಕಮಲ 

ಲಕ್ಷ್ಮಿ ಪೇಪರ್ ಓದುತ್ತಾ ಇದ್ದಂತೆ ಕಣ್ಣಲ್ಲಿ ನೀರು ತುಂಬಿ ಬಂತು. ಹಾಗೆ ತಾನು ಕುಳಿತ ಖುರ್ಚಿಗೆ ತಲೆ ಚಾಚಿ ಯೋಚಿಸುತ್ತ ಇದ್ದಳು. ತಾನು ಈ ಊರಿಗೆ ಬಂದು ರಿಪೋರ್ಟ ಮಾಡಿಕೊಂಡು ಐದಾರು ತಿಂಗಳು ಆಗುತ್ತಾ ಬಂದರು ತನ್ನ ಆಫೀಸ್ ಕೆಲಸ ಮತ್ತು ಮನೆ ಬಿಟ್ಟು ತಾನು ಚಿಕ್ಕ ವಯಸ್ಸಿನಲ್ಲಿ ಓಡಾಡಿದ ಹಳ್ಳಿಯ ಕಡೆ ಒಮ್ಮೆಯು ಹೋಗದಿರುವುದು ನೆನಪಾಯಿತು. ಅಮ್ಮನಿಗೊ ಬಳ್ಳಾರಿಗೆ ತನ್ನ  ಟ್ರಾನ್ಸಫರ್ ಮಾಡಿದ್ದೆ ದೊಡ್ಡ ತಲೆನೋವಾಗಿತ್ತು.  ಇನ್ನು ಕಹಿ ನೆನಪು ಹೊತ್ತು ಬಂದ ಬ್ಯಾಗೂರಿಗೆ ಹೋಗುವುದು ಕನಸಲ್ಲು ಇಲ್ಲ ಅಂತ ಹೇಳಬಹುದು.
ಲಕ್ಷ್ಮಿಯ ತಾಯಿ ರೇಣಮ್ಮನಿಗೆ ಆದಷ್ಟು ಮಗಳನ್ನು ತಮ್ಮೂರಿನಿಂದ ದೂರ ಇಡಬೇಕು ಅನ್ನೋ ಆಸೆಯಿಂದಲೆ ಕಷ್ಟ ಪಟ್ಟು ಬೆಂಗಳೂರಿಗೆ ಹೋಗಿದ್ದರು. ಆದರೆ ವಿಧಿ ಅವರನ್ನು ಈ ಊರಿಗೆ ಬರುವಂತೆ ಮಾಡಿತು. ಆಗಿನ ಪರಿಸ್ಥಿತಿಗೂ ಈಗಿನ ಪ್ರಿಸ್ಥಿತಿಗೂ ತುಂಬಾ ವ್ಯತ್ಯಾಸ ಇತ್ತು. ಈಗ  ಮಗಳು ಕಲಿತು ಜಿಲ್ಲಾಧಿಕಾರಿ ಆಗಿದ್ದಳು. ಆದರು ಬೆನ್ನಿಗೆ ಅಂಟಿದ ಜಾತಿ ಮತ್ತು ಕೆಲವು ಅನಿಷ್ಟಗಳು ಮಗಳ ಜೀವನಕ್ಕೆ ಮುಳ್ಳಾಗಬಾರದು ಎಂದು ಎಲ್ಲರಿಂದ ದೂರ ಇರಿಸಿದ್ದಳು. ಬೆಂಗಳೂರಂತ ಊರಲ್ಲಿ ಅವರನ್ನು ಗುರುತು ಹಿಡಿಯುವವರು ಯಾರು ಇಲ್ಲದಿದ್ದರು, ಈ ಊರಿನಲ್ಲಿ ಸಾದ್ಯತೆ ಇತ್ತು. ಮಗಳಿಗೆ ತಮ್ಮ ದೇವದಾಸಿ ಪದ್ದತಿಯ ಬಗ್ಗೆ ತಿಳಿದಿದ್ದರು,ಅಪ್ಪ ಯಾರು ಅಂತ ತಿಳಿಯದ ಹೆಣ್ಣು ಮಗಳಿಗೆ ಈ ಊರಲ್ಲಿ ಎದುರಿಸುವ ಕಷ್ಟ ರೇಣುಕಮ್ಮನಿಗೆ ತಿಳಿದಿತ್ತು. ಲಕ್ಷ್ಮಿಯ ತಂದೆಯ ಕಾಲಂ ನಲ್ಲಿ ಅವಳು ತಾಯಿ ರೇಣುಕಮ್ಮನ ಹೆಸರೆ ಹಾಕುತ್ತಿದ್ದಳು.
ರೇಣುಕಮ್ಮ ಮಗಳಿಗೆ ಅಂತ ನೀಡಿದ ಮನೆಯಲ್ಲಿ ಆಳು-ಕಾಳು ಮತ್ತು ಸಹಲ ಸೌಭಾಗ್ಯವು ಇತ್ತು. ಸುಮ್ಮನೆ ಕುಳಿತು  ಒಮ್ಮೆ ತಮ್ಮ  ಗತ ಕಾಲದ ಬಗ್ಗೆ ಯೋಚಿಸಲು ತೊಡಗಿದಳು.
ಬ್ಯಾಗೂರಿನ ಬಡ ಕುಟುಂಬದಲ್ಲಿ  ಹುಟ್ಟಿದ ರೇಣುಕಮ್ಮನಿಗೆ ಸುಖದ ಅರ್ಥವೆ ತಿಳಿಯದಾಗಿತ್ತು. ದೇವದಾಸಿ ಜನಾಂಗದಲ್ಲಿ ಜನಿಸಿದ ರೇಣುಕಮ್ಮ ಅದನ್ನೆ ತಾವು ಪಾಲಿಸಿಕೊಂಡು ಬಂದರು. ಅವರಿಗೆ ಕಲಿಯುವ ಆಸೆ ಇತ್ತು. ಆದರೆ ಶಾಲೆಗೆ ಕಳಿಸುವ ಮನಸ್ಸು ಮನೆಯಲ್ಲಿ ಯಾರಿಗೂ ಇಲ್ಲವಾಗಿತ್ತು. ಅವರ ಮುಂದಿನ ಜೀವನ ಹೇಗೆ ಎಂಬುದು ಮೊದಲೆ ನಿರ್ಧಾರ ಆಗಿತ್ತು. ರೇಣುಕಮ್ಮ ದೊಡ್ಡವಳಾದ ತಕ್ಷಣ ಅವಳನ್ನು ದೇವದಾಸಿ ಮಾಡಲಾಗಿತ್ತು. ಹೆಸರಿಗೆ ಯಲ್ಲಮ್ಮನ ದಾಸಿ ಅಂತ ಆದರು ಊರ ಮುಖಂಡರು ಮತ್ತು ಹಣವಂತರು  ಹೇಳಿದ ತಕ್ಷಣ ಅವಳು ಅಲ್ಲಿಗೆ ಹೋಗಿ ತನ್ನನ್ನು ತಾನು ಅರ್ಪಿಸಿಕೊಳ್ಳ ಬೇಕಾಗಿತ್ತು. ಕಲಿಯದ ರೇಣುಕಮ್ಮನಿಗೆ ಇದನ್ನು ವಿರೋದಿಸುವ ದಿಟ್ಟತನ ಇಲ್ಲವಾಗಿತ್ತು. ತಮ್ಮ ಜನಾಂಗದವರನ್ನು ಈ ತರ ಉಪಯೋಗಿಸುವುದು ಖಂಡಿಸಲು ಏನಾದರು ಮಾಡಬೇಕು ಅಂತ ಯೋಚಿಸಿದ್ದಳು. ಆದರೆ ಅವಳ  ಸಪೊರ್ಟ ಗೆ ಯಾರು ಬರಲಿಲ್ಲ. ಆ ಕಾಲವು ಹಾಗೆ ಇತ್ತು.  ಗತಿ ಇಲ್ಲದೆ ಆ ಜೀವನಕ್ಕೆ ಹೊಂದಿಕೊಂಡಿದ್ದಳು. ಆದರೆ ಹೇಗಾದರು ಮಾಡಿ ಈ ಜನರಿಂದ ಆಚೆ ಹೋಗಬೇಕು, ತಾನೆ ಬೇರೆ ಜೀವನ ಕಟ್ಟಿಕೊಳ್ಳ ಬೇಕು ಎಂದು ದೃಡ ನಿರ್ಧಾರ ಮನಸ್ಸಿನ ಮೂಲೆಯಲ್ಲಿ ಇತ್ತು.
ಕಾಲ ಕಳೆದಂತೆ ರೇಣುಕಮ್ಮ ಒಂದು ಮಗಳಿನ ತಾಯಿ ಆದಳು. ಹೇಗೊ ಕಷ್ಟಪಟ್ಟು ಅವಳನ್ನು ಸಾಕುತ್ತಿದ್ದಳು. ಆಗ ತಾನೆ ಒಂದು ಕೋಲಿಯಲ್ಲಿ ಸರಕಾರಿ ಶಾಲೆಯನ್ನು ಶುರು ಮಾಡಿದ್ದರು. ಮಗಳನ್ನು ಶಾಲೆಗೆ ಕಳಿಸಿದ್ದಳು. ತನ್ನವರಿಂದಲೇ ಬೇಕಾದಷ್ಟು ವಿರೋದ ಇದ್ದರು ಹಠದಿಂದ ಮಗಳನ್ನು ಶಾಲೆಗೆ ಸೇರಿಸಿದ್ದಳು. ಪಕ್ಕದ ಮನೆ ಯಂಕಮ್ಮ ಹೇಳಿದ್ದಳು,” ಎಷ್ಟು ದಿನ ಅಂತ ಮಗಿನ ಶಾಲೆಗೆ ಕಳ್ಸ್ ಆಕ್ ಹತ್ತಿಮಗಿ ದೊಡ್ಡವಳು ಆಗ್ಲಿ ಗೆಜ್ಜೆ ಕಟ್ಟಿ ದೇವದಾಸಿ ಆಗ್ತಾಳ್ ನೋಡ್. ಮೈ ಕೈ ತುಂಬಿದ ಮಗಿನ್ ಸುಮ್ನೆ ಶಾಲಿಗ್ ಕಳ್ಸೊಕ್ ಆಗೈತೆನೆಅಂತ ಹೇಳಿದ್ದಳು. ಮಾತು ರೇಣಮ್ಮನ ಮನಸ್ಸಿಗೆ ನಾಟಿತ್ತು. ಇಗಲೆ ಲಕ್ಷಣವಾಗಿದ್ದ ಮಗು ಇನ್ನು ಬೆಳಿಯುತ್ತ ಇನ್ನು ಲಕ್ಷಣ ಆಗುವಳು ಎಂದು ಅನಿಸಿತು. ಹಾಗೆನಾದ್ರು ಆದರೆ ಇವರ ಮದ್ಯೆ ಅವಳಿಗೆ ಉಳಿಗಾಲವಿಲ್ಲ. ತಮ್ಮ ಕಸುಬನ್ನೆ ಮುಂದುವರಿಸಲು ಗೆಜ್ಜೆ ಕಟ್ಟುವರು. ಮೊದಲೆ ಪಟೇಲರ ಮನೆಯ ಬಗ್ಗೆ ತಿಳೀದಿತ್ತು. ಅಲ್ಲಿನ ಪರಂಪರಿಕವಾಗಿ ನಮ್ಮನ್ನು ಹತ್ತಿಕ್ಕಿದವರು ಇನ್ನು ತನ್ನ ಮಗಳ ಮೇಲೆ ಅಲ್ಲಿ ಇದ್ದ ಲಕ್ಷ್ಕಿ ವಯಸ್ಸಿನ ಗಂಡು ಮಕ್ಕಳು ಇವಳ ಮೇಲೆ ಕಣ್ಣು ಹಾಕುವುದು ಖಂಡಿತ ಎಂದು ಊಹೆ ಮಾಡಿದ್ದಳು. ಅವಳ ಊಹೆ ನಿಜ ಆಗಿತ್ತು. ಮೇಲಿನ ಜಾತಿ ಮತ್ತು ಹಣ ಉಳ್ಳವರು ಇವರನ್ನು ತುಂಬಾ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು. ಹೇಗಾದರು ಮಾಡಿ ಇಲ್ಲಿಂದ ಕಾಲ್ ಕೀಳಬೇಕು ಅಂತ ಯೋಚಿಸಿದಳು. ಮಗಳು ಲಕ್ಷ್ಮಿ ಕಲಿಯಲು ಚುರುಕಾಗಿ ಇದ್ದಳು.  ಇವಳನ್ನು ಚನ್ನಾಗಿ ಓದಿಸುವುದೆ ರೇಣುಕಮ್ಮನ ಗುರಿ ಆಗಿತ್ತು. ಹಾಗೆಯೇ ಮಗಳನ್ನು ಈ ಕ್ರೂರ ಪ್ರಪಂಚದಿಂದ ದೂರ ಇಡುವುದು ಅವಳ ಆಸೆ ಆಗಿತ್ತು.
ಇನ್ನು ತಡ ಮಾಡಬಾರದು ಹೇಗಾದರು ಮಾಡಿ ಈ ಊರನ್ನು ಬಿಟ್ಟು ಮಗಳನ್ನು ಕಲಿಸ ಬೇಕು ಎಂದು ಯೋಚಿಸಿದಳು. ಅವಳ ಮುಂದಾಲೋಚನೆ ಚನ್ನಾಗಿ ಇತ್ತು. ಈ ವರ್ಷದ ವಾರ್ಷಿಕ ಪರಿಕ್ಷೆ ಮುಗಿಯಲಿ. ಅದಾದ ತಕ್ಷಣ ಹೊರಟರೆ ಬೇರೆ ಊರಲ್ಲಿ ಶಾಲೆಗೆ ಮೊದಲಿನಿಂದಲೆ ಸೇರಿಸಬಹುದು ಅಂತ ಯೋಚಿಸಿದಳು. ಅದು ಅಲ್ಲದೆ ಸ್ವಲ್ಪ ಹಣ ಹೊಂದಿಸಲು ಸಮಯ ಬೇಕಿತ್ತು. ಹಿಂದು-ಮುಂದು ಯೋಚನೆ ಮಾಡದೆ ಬರಿ ಕೈನಲ್ಲಿ ಹೋಗೋದು ಸರಿ ಅಲ್ಲ ಅಂತ ಯೋಚಿಸಿದ್ದಳು. ಇದನ್ನು ಯಾರ ಬಳಿಯು ಬಾಯಿ ಬಿಡಲಿಲ್ಲ. ಮಗಳ ಹತ್ತಿರವು ಏನು ಹೇಳಲಿಲ್ಲ. ಚಿಕ್ಕ ಹುಡುಗಿ ತನ್ನ ವಾರಗೆಯವರ ಜೊತೆ ಬಾಯಿ ಬಿಟ್ಟರೆ ಎಂಬ ಅಳುಕಿತ್ತು.  ಕಷ್ಟ ಪಟ್ಟು ಸ್ವಲ್ಪ ರೊಕ್ಕ ಹೊಂದಿಸಲು ಶುರು ಮಾಡಿದಳು. ತನ್ನಲ್ಲಿರುವ ದೊಡ್ಡ ಪಾತ್ರೆಗಳನ್ನು ಗುಜುರಿ ಅಂಗಡಿಗೆ ಹಾಕಿದ್ದಳು. ಚಿಕ್ಕ-ಚಿಕ್ಕ ಪಾತ್ರೆಗಳನ್ನು ಒಂದು ಚೀಲಕ್ಕೆ ತುಂಬುತ್ತ ಬಂದಳು. ತನ್ನಲ್ಲಿರುವ ಸೀರೆಯನ್ನು  ಖೌದಿ ಮಾಡಿದ್ದಳು. ತನಗೆ ಎಂದು ಕೆಂಪು ಕೆಲವು ಪಟ್ಟೆ ಸೀರೆಯನ್ನು ತಂದಿಟ್ಟು ಕೊಂಡಿದ್ದಳು. ಹೇಗೋ ಅಷ್ಟೊ-ಇಷ್ಟೋ ರೊಕ್ಕ ಹೊಂದಿಸಿದಳು. ಇನ್ನೇನು ಮಾರ್ಚ ತಿಂಗಳು ಬಂದು ಮಗಳ ನಾಲ್ಕನೆ ಇಯತ್ತೆ ಮುಗಿತು. ಆದಾದ ಸ್ವಲ್ಪ ದಿನಕ್ಕೆ ರೇಣುಕಮ್ಮ ಯಾರಿಗೂ ಹೇಳದೆ ಊರಿಂದ ಕಾಲ್ ಕಿತ್ತಿದ್ದಳು.
ಊರಲ್ಲಿ ರೇಣುಕಮ್ಮನ ಸುಳಿವೆ ಇಲ್ಲದ್ದನ್ನು ನೋಡಿ ಅವಳು ಎಲ್ಲೊ ಅವರ ಸಂಭಂದಿಕರ ಮನೆಗೆ ಹೋಗಿದ್ದಾಳೆನೋ ಅಂತ ಭಾವಿಸಿದ್ದರು. ತುಂಬಾ ದಿನ ಎಲ್ಲು ಕಾಣದೆ ಇದ್ದಾಗ ಏನೋ ಒಂದಿಷ್ಟು ಉಹಾಪೋಹದ ಕಥೆ ಹರಡಿತು.ಪುನಃ ಅವಳನ್ನು ಯಾರು ನೆನಪಿಸಿಕೊಳ್ಳಲಿಲ್ಲ.
ಇತ್ತ ರೇಣುಕಮ್ಮ ಮಗಳು ಲಕ್ಷ್ಮಿಯನ್ನು ಕಟ್ಟಿಕೊಂಡು ಬೆಂಗಳೂರು ಪಟ್ಟಣಕ್ಕೆ ಬಂದಳು. ಆಕೆಗೆ ಬಳ್ಳಾರಿ ಅಥವಾ ಅದರ ಆಸು-ಪಾಸು ಎಲ್ಲು ಹೋಗಲು ಮನಸ್ಸಾಗಲಿಲ್ಲ. ಗುರುತು ಸಿಗದ ಜಾಗದಲ್ಲಿ ಮಗಳ ಜೊತೆ ಹೊಸ ಬದುಕು ಕಟ್ಟಿಕೊಳ್ಳುವ ಆಸೆ ಆಗಿತ್ತು. ಊರು ಬಿಟ್ಟು ಬರುವಾಗ ಅವಳು ತನ್ನನ್ನೆ ಬದಲಿಸಿಕೊಂಡಿದ್ದಳು. ತನ್ನ ತಲೆಯ ಕೂದಲನ್ನು ತೆಗೆದು ಮಡಿ ಸೀರೆ ಉಟ್ಟಿದ್ದಳು.(ಗಂಡ ಸತ್ತ ನಂತರ ಊಡುವ  ಕೆಂಪು ಸೀರೆ). ಬಳ್ಳಾರಿಯ ಕಡೆ ಮೇಲ್ ಜಾತಿಯ ಹೆಂಗಸರು ಗಂಡ ಸತ್ತ ನಂತರ ಮಡಿ ಆಗಿದ್ದು ನೋಡಿದ್ದಳು. ತನ್ನ ಹಿನ್ನೆಲೆ , ಜಾತಿ ಎಲ್ಲವನ್ನು ಮರೆ ಮಾಡಿದ್ದಳು.
ಗೊತ್ತು ಗುರಿ ಇಲ್ಲದೆ ಪರ ಊರಿಗೆ ಬಂದ ಅವಿದ್ಯಾವಂತಳಿಗೆ ಜೀವನ ಕಷ್ಟ ಇತ್ತು. ಆದರೆ ರೇಣುಕಮ್ಮ ಎಲ್ಲವನ್ನು ಎದುರಿಸಲು ತಯಾರಾಗಿ ಇದ್ದಳು. ಅವಳಿಗೆ ಮಗಳದ್ದೆ ಒಂದು ದೊಡ್ಡ ಜವಬ್ದಾರಿ ಆಗಿದ್ದಳು.
ಬೆಂಗಳೂರಿಗೆ ಬಂದು ರೈಲು ಇಳಿದವಳು ಆಚೆ ಹೋಗಲೆ ಇಲ್ಲ.  ರೈಲು ನಿಲ್ದಾಣದಲ್ಲೆ ಸಿಕ್ಕಿದ್ದನ್ನು ತಿಂದು ಮತ್ತು ಕೆಲವು ತಿಂಡಿಗಳನ್ನು ಸ್ವಲ್ಪ  ಕಟ್ಟಿಕೊಂಡು ಬಂದಿದ್ದಳು. ಜೋಳದ ಕಡಕ್ ರೊಟ್ಟಿ ಮತ್ತು ಚಟ್ನಿ ಪುಡಿಗಳನ್ನು ಜಾಸ್ತಿಯೆ ಕಟ್ಟಿಕೊಂಡು ಬಂದಿದ್ದಳು. ರೈಲು ನಿಲ್ದಾಣದಲ್ಲೆ ಇರುವ  ಶೌಶಾಲಯವನ್ನು ಬಳಸಿದಳು. ಕೆಲವರು ಇವಳನ್ನು ಪ್ರಶ್ನೀಸಿದ್ದರು. ಏನೇನೋ ಉತ್ತರ ಕೊಟ್ಟು ಪಾರಾಗಿದ್ದಳು. ರೇಣುಕಮ್ಮನಿಗೆ ತಿಳಿದಿತ್ತು ರಾತ್ರಿ-ಹಗಲು ಗಿಜಿಗುಡೊ ರೈಲ್ವೆ ನಿಲ್ದಾಣ ಸುರಕ್ಷಿತ ಎಂದು ಅರಿತಿದ್ದಳು. ಏನು ಕಲಿದೆ ಇರೋ ರೆಣುಕಮ್ಮನಿಗೆ ಜೀವನವೆ ಮಹಾವಿದ್ಯಾಲಯ ಆಗಿತ್ತು. ದೈರ್ಯ, ಛಲ, ಅವಳನ್ನು ಗಟ್ಟಿ ಮಾಡಿತ್ತು. ರೈಲ್ವೆ ನಿಲ್ದಾಣ್ದಲ್ಲಿ ಕೆಲಸ ಮಾಡುವವರನ್ನು ಕೇಳಿದಳು,”ಇಲ್ಲಿ ಚೊಕ್ಕ್ ಮಾಡೋ ಕೆಲಸ ಇದ್ರೆ ನನ್ಗು ಹೇಳ್ರಿ. ನಾನು ನಿಮ್ ಕೂಡ್ ಕೆಲ್ಸ್ ಮಾಡ್ತೀನಿ” ಅಂತ ಅಲ್ಲಿ ಕಸ ಗುಡಿಸುವವರ ಬಳಿ ಕೇಳುತ್ತಿದ್ದಳು. ಕೆಲವೊಬ್ಬರು ಹೋಗಮ್ಮ ಅಂತ ಉದಾಸೀನ ತೋರಿಸಿದರೆ, ಇನ್ನು ಕೆಲವರು ಯಾವುದು ಉತ್ತರ ಕೂಡ ಕೊಡಲಿಲ್ಲ. ಆದರು ಬಿಡದೆ ಸ್ವಲ್ಪ ವಯಸ್ಸಾದ ಹೆಂಗಸರ ಹತ್ತಿರನೋ, ಅಥವಾ ಗಂಡಸರ ಹತ್ತಿರನೋ ಬೇಡಿಕೊಂಡಳು. “ನಿಮ್ಮ ಮುಖಂಡ ಯಾರ್ ಅಂತ ಹೇಳ್ರಿ ನಾನ್ ಅವ್ರ ಹತ್ರ ಕೇಳ್ಕೊಳ್ತೀನಿ. ನನ್ಗು ಒಂದ್ ಕೆಲ್ಸ್ ಅಂತ ಆದ್ರೆ ನಾನು ನನ್ನ್ ಮಗಿ ಬದ್ಕೊತ್ತಿವಿ” ಅಂತ ಕೇಳಿಕೊಂಡಳು. ಹೀಗೆ ಬೇಡಿಕೊಳ್ಳುವಾಗ ಅಲ್ಲಿ ಕೆಲಸ ಮಾಡುವ ಒಬ್ಬ ವಯಸ್ಸಾದ ಹೆಂಗಸಿಗೆ ಅವಳನ್ನು ಮತ್ತು ಅವಳ ಮಗಳನ್ನು ನೋಡಿ ಕನಿಕರ ಹುಟ್ಟಿತು. ಆಕೆ ಇವಳನ್ನು ವಿಚಾರಿಸಿದಳು,” ಯಾರಮ್ಮ ನೀನು. ಮೊನ್ನೆಯಿಂದ ಈ ಸ್ಟೇಶನ್ ನಲ್ಲಿ ಮಗಳನ್ನು ಕಟ್ಟಿಕೊಂಡು ಇಲ್ಲೆ ಇದ್ದೀಯಾ? ಯಾಕ್ ನಿಮ್ ಊರಿಗೆ ಹೋಗೋಕೆ ಖಾಸ್ ಇಲ್ವೇನಮ್ಮ?” ಅಂತ ಮೊದಲ ಬಾರಿ ಇಲ್ಲಿಗೆ ಬಂದ ಮೇಲೆ ಒಬ್ಬ ಹೆಂಗಸು ಅವಳನ್ನು ವಿಚಾರಿಸಿದಳು. ಆಗ ರೇಣುಕಮ್ಮ ತನ್ನ ಪೂರ್ವಾಪರದ ಯಾವ ವಿಷಯವನ್ನು ಹೇಳದೆ, “ನನ್ ಗಂಡ ಸತ್ತು ಹೋದ. ಅವ್ರು ತೀರ್ ಹೋದ್ ಮ್ಯಾಲ್ ನನ್  ಗಂಡನ್  ಮನ್ಯಾವ್ರು ಹೊರಗ್ ದಬ್ಬಿದ್ರಿ. ನನ್ ಕೂಡ್  ಯಾರು ಇಲ್ರಿ ಅದಿಕ್ಕೆ ಇರೋ ಒಂದ್ ಮಗಿನ್  ಕಟ್ಟಿಕೊಂಡ್ ಈ ಊರಿಗ್ ಬಂದೆನ್ರಿ. ಹೊಟ್ಟೆ ಪಾಡಿಗೆ ಏನಾದ್ರು ಕೆಲಸ ಅಂತ ಆದ್ರೆ ಸಾಕ್ರಿ” ಅಂತ ರೇಣುಕಮ್ಮ ತನ್ನ ಕಷ್ಟ ಹೇಳಿಕೊಂಡಳು. ರೇಣುಕಮ್ಮ ತಲೆ ಕೂದಲು ತೆಗೆದಿದ್ದನ್ನು ಮತ್ತು ಅವಳ ಸೀರೆ ಮತ್ತು ಮಾತು ಅವಳನ್ನು ಗಂಡ ಸತ್ತಿರುವ ಉತ್ತರ ಕರ್ನಾಟಕದ ಕಡೆಯವಳು ಅಂತ ಹೇಳಬಹುದು. ಆ ಹೆಂಗಸಿಗೆ ಆಕೆಯನ್ನು ಮತ್ತು ಮಗಳನ್ನು ನೋಡಿ ಕನಿಕರ ಬಂತು. ಆಕೆ ತನ್ನ ಹೆಸರು ರತ್ನಮ್ಮ ಎಂದು ಹೇಳಿ ಇವಳ ಪರಿಚಯ ಹೇಳಿದಳು. ಇವಳು ರೇಣುಕಾ ಅಂಥ ಹೆಸರು ಸರಿಯಗಿ ಹೇಳಿದರು ಊರ ಹೆಸರನ್ನು ಹೇಳಲಿಲ್ಲ. ಬಳ್ಳಾರಿ ಎಂದಷ್ಟೇ ಹೇಳಿದಳು. ರತ್ನಮ್ಮ ಮಯಸ್ಸಿನಲ್ಲಿ ಹಿರಿಯವಳಾದ ಕಾರಣಕ್ಕೆ ಇವಳನ್ನು ರೇಣು ಎಂದು ಸಂಭೋದಿಸಲು ಶುರು ಮಾಡಿದಳು. ರತ್ನಮ್ಮ ರೇಣುಕಮ್ಮನಿಗೆ  ಹೇಳಿದಳು, “ ನೋಡಮ್ಮ ಇಲ್ಲಿ ನನ್ನ ಕೆಲಸ ನಾಲ್ಕು ಗಂಟೆಗೆ ಮುಗಿಯುತ್ತದೆ. ನಂತರ ಇಲ್ಲೆ ಹತ್ತಿರ ನನ್ನ ಶೇಡ್ ಇದೆ. ಇವತ್ತು ಅಲ್ಲಿಗೆ ಹೋದರಾಯಿತು. ನಾಳೆ ನಿನ್ನ ಕೆಲಸದ ಬಗ್ಗೆ ಯೋಚಿಸೋಣ” ಅಂತ ಹೇಳಿದಳು. ಆಗ ರೇಣುಕಮ್ಮನಿಗೆ ಸಾಕ್ಷಾತ್ ಯಲ್ಲಮ್ಮ ಬಂದು ತನಗೆ ದಾರಿ ತೋರಿಸಿದ ಹಾಗಾಯಿತು. ಅವಳ ಕಣ್ಣಲ್ಲಿ ನೀರು ತುಂಬಿ ಬಂತು. ಕೈ ಮುಗಿದು “ನಿಮ್ ಉಪಕಾರನ್ನಾ ಈ ಜನ್ಮ್ ದಲ್ಲಿ ಮರಿಯಲ್ಲ ನನ್ ಅವ್ವ…ನೀವ್ ನನ್ ಪಾಲಿಗೆ ಸಾಕ್ಷಾತ್ ಯಲ್ಲಮ್ಮ್” ಅಂತ ಹೇಳಿದಳು. ಆಗ ರತ್ನಮ್ಮ್,” ಅದೆಲ್ಲ ಬೇಡ  ನಾನು ಹೊಟ್ಟೆಲಿ ಹುಟ್ಟಿದ ಮಕ್ಕಳಿಂದನೆ ದೂರ ಆಗಿ ಇಲ್ಲಿ ಒಬ್ಬಳೆ ದುಡಿದು ತಿನ್ನುತ್ತಾ ಇದ್ದೀನಿ. ನನ್ಗೆ ನಿನ್ನ ಕಷ್ಟ ಅರ್ಥ ಆಗತ್ತೆ. ಅದು ಅಲ್ದೆ ಈ ಸಣ್ಣ ಹೆಣ್ಣ್ ಮಗುನ ಬೇರೆ ಸೇರ್ಗಲ್ಲಿ ಕಟ್ಟಿಕೊಂಡಿದಿಯಾ. ಏನೋ ನಿನ್ಗೆ ಒಂದ್ ಕೆಲ್ಸ್ ಕೊಡ್ಸಿದ್ರೆ ನನ್ ಗಂಟೆನ್ ಹೋಗತ್ತೆ. ಸರಿಯಾಗಿ ನಾಲ್ಕು ಗಂಟೆಗೆ ಇಲ್ಲಿ ಸಿಗು” ಅಂತ ಹೇಳಿ ತಮ್ಮ ಕೆಲಸಕ್ಕೆ ಹೋದರು. ಇತ್ತ ರೇಣುಕಮ್ಮನಿಗೆ ರತ್ನಮ್ಮ ಸಿಕ್ಕಿದ್ದು ಮರಭೂಮಿಯಲ್ಲಿ ನೀರು ಸಿಕ್ಕಂತೆ ಆಯಿತು. ಇನ್ನೆಷ್ಟು ದಿನ ಈ ರೈಲ್ವೆ ಸ್ಟೇಷನ್ನಲ್ಲಿ ಇರ ಬೇಕು ಅಂತ ಯೋಚಿಸುತ್ತಿದ್ದಳು. ಅದರೆ ರತ್ನಮ್ಮ ಸಿಕ್ಕಿದ್ದು ಏನೋ ಸ್ವಲ್ಪ ಭರವಸೆ ಬಂತು. ಹೇಗಾದ್ರು ಒಂದು ಕೆಲಸ ಗಿಟ್ಟಿಸಿಕೊಳ್ಳ ಬೇಕು ಅಂತ ನಿರ್ಧಾರ ಮಾಡಿದಳು. ಅದು ಅಲ್ಲದೆ ರತ್ನಮ್ಮ ನೋಡಿದರೆ ಕೆಟ್ಟ ಹೆಂಗಸು ಅಂತ ಅನ್ನಿಸುತ್ತಿರಲಿಲ್ಲ. ಆದರೆ ತಾನೇ ಅವಳಿಗೆ ತನ್ನ ಪೂರ್ವಾಪರ ಹೇಳದೆ ಮೋಸ ಮಾಡಿದೆ ಅಂತ ಅನ್ನಿಸಿತು. ಆದ್ರೆ ಇದು ರೇಣುಕಮ್ಮನಿಗೆ ಅನಿವಾರ್ಯ ಆಗಿತ್ತು.
ರತ್ನಮ್ಮ ಹೇಳಿದ ಹಾಗೆ ಸರಿಯಾಗಿ ನಾಲ್ಕು ಗಂಟೆಗೆ ಅವಳು ಹೇಳಿದ ಜಾಗಕ್ಕೆ ಬಂದಳು. ಅವಳು ಬರುವ ಮೊದಲೆ ರೇಣುಕಮ್ಮ ತನ್ನ ಚೀಲದೊಂದಿಗೆ ಬಂದು ಕುಳಿತಿದ್ದಳು. ಇಲ್ಲಿ ಏನಾಗುತ್ತದೆ ಅಂತ ಅರಿವಿಲ್ಲದ ಮಗಳು ಲಕ್ಷ್ಮಿ ಹೋಗೋ ಬರೋ ಟ್ರೇನ್ ನೋಡುತ್ತಿದ್ದಳು. ಅಲ್ಲಿಗೆ ಬಂದ ರತ್ನಮ್ಮ ಇವರಿಬ್ಬರನ್ನು ಕರೆದುಕೊಂಡು ತನ್ನ ಶೇಡ್ ಗೆ ಹೋಗಿದ್ದಳು.
ರತ್ನಮ್ಮ ಇರುವುದು ಒಂದು ಸ್ಲಮ್. ಅಲ್ಲಿ ಕೆಲವು ಕೆಲಸ ಮಾಡುವವರ ಮನೆ ಇದ್ದವು. ಅಲ್ಲೆ ಸ್ವಲ್ಪ ಮೇಲೆ ಬಂದರೆ ಸ್ವಲ್ಪ ಮೇಲ್ವರ್ಗದವರು ವಾಸಿಸುವಂತ ಜಾಗ ಮತ್ತು ಒಳ್ಳೊಳ್ಳೆ  ಅಪಾರ್ಟ್ಮೆಂಟ್ ಇದ್ದವು.  ಸ್ಲಮ್ ನಿಂದ ಸ್ವಲ್ಪ ದೂರದಲ್ಲಿ  ಒಂದು ಪುಟ್ಟ ಶೇಡ್ ನಲ್ಲಿ ರತ್ನಮ್ಮ ಇದ್ದಳು. ಇಲ್ಲಿ ಎರಡು ಹೆಂಗಸರು ಮತ್ತು ಒಂದು ಮಗು ಹೇಗೋ ಇರಬಹುದು. ರತ್ನಮ್ಮ ಮನೆಗೆ ಬಂದವರು ರೇಣುಕಮ್ಮ ಸ್ವಲ್ಪ ನಿರಾಳವಾಗಿ ಉಸಿರು ತೆಗೆದಳು. ರತ್ನಮ್ಮನ ಬಳಿ “ನೀವ್ ಸಿಕ್ಕಿಲ್ಲ್ ಅಂದ್ರ ಇನ್ನ್ ಎಷ್ಟ್ ದಿನ್ ಅಂತ ರೈಲ್ವೆ ಸ್ಟೇಶನ್ ನಲ್ಲಿ ಇರಬೇಕಾಗಿತ್ತೇನ್ರಿ”  ಅಂತ ಹೇಳಿದಳು. ರತ್ನಮ್ಮ ,”ಯಾಕಮ್ಮ ಹುಟ್ಟುಸಿದವನು ಹುಲ್ಲು ಮೇಯಿಸುತ್ತಾನೆ. ಗಂಡ ಸತ್ತರೆನಂತೆ ನಿನಗೆ ದುಡಿದು ತಿನ್ನೊ ಶಕ್ತಿ ಇದೆ. ದುಡಿದು ತಿನ್ನು. ನನ್ನ ನೋಡು ದುಡಿಯುವ ನಾಲ್ಕು ಗಂಡ್ ಮಕ್ಕಳಿದ್ದರು ಒಬ್ಬಳೆ ಬೇಯಿಸಿಕೊಂಡು ತಿನ್ನೊ ಗತಿ ಬಂದಿದೆ” ಅಂತ ಬೆಸರದಲ್ಲಿ ಹೇಳಿದರು. ರೇಣುಕಮ್ಮನಿಗೆ ಇವರು ಮಕ್ಕಳಿಂದ ದೂರ ಬಂದಿರುವುದು ತಿಳಿದು ಜಾಸ್ತಿ ಏನು ಕೇಳಲಿಲ್ಲ.
ಮರುದಿನ ರತ್ನಮ್ಮ ಅಲ್ಲೆ ಇನ್ನೊಂದು ಶೇಡ್ ನಲ್ಲಿ ಇದ್ದ ಒಬ್ಬ ಹೆಂಗಸಿಗೆ ಹೇಳಿ ಅವಳು ಹೋಗುವ ಅಪಾರ್ಟ್ಮೆಂಟ್ ನಲ್ಲಿ ಏನಾದರು ಕೆಲಸ ಇದ್ದರೆ ಇವಳಿಗೆ ಹೇಳು ಅಂತ ಕೇಳಿದಳು. ಅಲ್ಲಿ ಕೆಲಸದವರ ಅವಶ್ಯಕತೆ ಇತ್ತು. ರೇಣುಕಮ್ಮನಿಗೂ ಒಂದೆರಡು ಮನೆ ತೋರಿಸಿದಳು. ರೇಣುಕಮ್ಮನ ಪ್ರಮಾಣಿಕ ಮತ್ತು ಅವಳ ಕೆಲಸ ನೋಡಿ ಅಪಾರ್ಟ್ಮೆಂಟ್ ನಲ್ಲಿ ಇನ್ನು ಕೆಲವು ಮನೆಗಳು ದೊರಕಿದವು. ರೇಣುಕಮ್ಮ ಮತ್ತು ರತ್ನಮ್ಮ ಇಬ್ಬರು ಒಂದೆ ಶೇಡ್ ನಲ್ಲಿ ಇದ್ದರು. ಒಬ್ಬರಿಗೊಬ್ಬರು ಆಸರೆ ಆಯಿತು. ಇಬ್ಬರು ಮನೆ ಖರ್ಚಿಗೆಂದು ತಮ್ಮ ಸಂಬಳವನ್ನು ಕೊಡುತ್ತಿದ್ದರು. ಲಕ್ಷ್ಮಿಗಂತು ರತ್ನಮ್ಮ ಅವಳ ಪಾಲಿಗೆ ದೊಡ್ಡಮ್ಮನಾದಳು. ಎಲ್ಲರಿಂದ ದೂರವಾದ ರತ್ನಮ್ಮನಿಗೆ ಮೊಮ್ಮಗಳು ಸಿಕ್ಕಂತಾಯಿತು.
ರೇಣುಕಮ್ಮ ಅಲ್ಲೆ ಹತ್ತಿರದಲ್ಲಿ ಇರುವ ಒಂದು ಸರಕಾರಿ ಶಾಲೆಗೆ ಹಾಕಿದಳು. ಕಲಿಯಲು ಮುಂದಿರುವ ಲಕ್ಷ್ಮಿ ಚನ್ನಾಗಿ ಓದುತ್ತಿದ್ದಳು. ರೇಣುಕಮ್ಮನಿಗೆ ಐದಾರು ಮನೆ ಕೆಲಸ ಸಿಕ್ಕಿತು. ಮನೆಗೆಲಸ ಮಾಡಿ ತನ್ನ ಮತ್ತು ಮಗಳ ಜೀವನ ಸಾಗುತ್ತಿತ್ತು. ರೇಣುಕಮ್ಮ ಹೋಗೋ ಒಂದು ಮನೆ ನಿವೃತ್ತಿ ಹೊಂದಿದ ಕಾಲೇಜ್ ಪ್ರೋಪೇಸರ್ ಆಗಿದ್ದರು. ಅವರ ಮನೆಯ ಒಂದು ರೂಮ್ ಪುಸ್ತಕದಲ್ಲಿ ತುಂಬಿತ್ತು. ಮಕ್ಕಳೆಲ್ಲ ಬೇರೆ-ಬೇರೆ ಊರಲ್ಲಿ ಇದ್ದರು. ಗಂಡ ಮತ್ತು ಹೆಂಡತಿ ಇಬ್ಬರು  ಸದಾ ಓದುವುದು ಮತ್ತು ಶಿಕ್ಷಣಿಕವಾಗಿ ಮಕ್ಕಳನ್ನು ಮುಂದೆ ತರುವುದರ ಬಗ್ಗೆ ಅವರ ಯೋಚನೆ ಮಾಡುತ್ತಿದ್ದರು. ಇದು ಲಕ್ಷ್ಮಿ ಪಾಲಿಗೆ ದೊಡ್ಡ ವರದಾನ ವಾಯಿತು. ಮೊದಮೊದಲು ರೇಣುಕಮ್ಮ ಮಗಳ ಓದುವ ಆಸಕ್ತಿ ಹೇಳಿ ಕೆಲವು ಪುಸ್ತಕಗಳನ್ನು ತಂದು ಕೊಡುತ್ತಿದ್ದಳು. ನಂತರದ ದಿನದಲ್ಲಿ ಲಕ್ಷ್ಮಿ ಆ ಪ್ರೋಪೇಸರ್ ಮನೆಗೆ ಹೋಗಿ ಅವರ ಮಾರ್ಗದರ್ಶನದಲ್ಲಿ ಓದುವುದು ಮುಂದುವರೆಸಿದಳು. ಲಕ್ಷ್ಮಿಯ ಓದಿನ ಆಸಕ್ತಿ ಮತ್ತು ಪ್ರೋಪೇಸರ್ ಅವರ ಮಾರ್ಗದರ್ಶನ ಲಕ್ಷ್ಮಿ ಐ ಎ ಎಸ್ ಪರೀಕ್ಷೆ ಕಟ್ಟಿದಳು.
ಇತ್ತ ರೇಣುಕಮ್ಮ ತನ್ನ ಮನೆ ಕೆಲಸದಿಂದ ಜೀವನ ಸಾಗುತ್ತಿತ್ತು. ಆದರೆ ಮಗಳ ಓದಿಗೆ ತುಂಬಾ ದುಡ್ಡು ಹೊಂದಿಸುವುದು ಕಷ್ಟ ಆದರು ಪ್ರೋಪೇಸರ್ ಲಕ್ಷ್ಮಿಯ ಯೋಗ್ಯತೆ ನೋಡಿ ಕೆಲವು ಸ್ಕೊಲರ್ಶಿಫ್ ಕೊಡಿಸಿದ್ದರು. ಅದು ಅಲ್ಲದೆ ತಾವು ಅನೇಕ ಸಲ ಅವಳ ಓದಿಗೆ ಸಹಾಯ ಮಾಡಿದ್ದರು.
ಇವೆಲ್ಲದರ ಪರಿಣಾಮ ಇಂದು ಲಕ್ಷ್ಮಿ ಐ.ಎ. ಎಸ್. ಆಗಿ ಜಿಲ್ಲಾಧಿಕಾರಿ ಆಗಿದ್ದಳು.
ರೇಣುಕಮ್ಮ ಒಮ್ಮೆ ತಾವು ಬಂದ ದಾರಿಯನ್ನು ಮೇಲಕು ಹಾಕುತ್ತ ನಿಟ್ಟುಸಿರು ಬಿಟ್ಟಳು. ಎಲ್ಲ ಮುಗಿದು ಆರಾಂ ಆಗಿ ಇರುವಾಗ ಯಾಕ್ ಈ ಊರಿಗೆ ವರ್ಗ ಆಯಿತು ದೇವರೆ ಇನ್ನೇನು ಕಾದಿದೆಯೋ ಅಂತ ಮನಸ್ಸಿನಲ್ಲಿ ಯೋಚಿಸಿದರು.
ಇತ್ತ ಲಕ್ಷ್ಮಿ ಇಂದಿನ ಪೇಪರ್ ನಲ್ಲಿ ಯಾವುದೋ ಒಂದು ಬಾಲಕಿ ದೇವದಾಸಿ ಆಗಲು ಒಪ್ಪಿಗೆ ಕೊಡದೆ ಇರೋ ಕಾರಣ ಕ್ಕೆ ಅವಳನ್ನು ಬಲತ್ಕಾರವಾಗಿ ದೇವದಾಸಿ ಮಾಡಿ ಊರಲ್ಲಿ ಮೆರವಣಿಗೆ ಮಾಡಿದುದರ  ಬಗ್ಗೆ ಓದಿ ಮನಸ್ಸು ಹಿಂಡಿದಂತಾಯಿತು. ಎಲ್ಲ ತನ್ನ ತಾಯಿಯ ತರ ಗಟ್ಟಿ ಇರುವುದಿಲ್ಲ. ಅವಳು ನನ್ನ ಊರು ಬಿಟ್ಟು ಬಚಾವ್ ಮಾಡಿದ ಹಾಗೆ ನಾನು ಈ ಊರಲ್ಲೆ ಇದ್ದು ಊರಿನ ಮತ್ತು ನನ್ನಂತ ಹೆಣ್ಣು ಮಕ್ಕಳನ್ನು ಈ ಅನಿಷ್ಟ ಪದ್ದತಿಯಿಂದ ಮುಕ್ತಿ ಕೊಡಬೇಕು ಎಂದು ತಿರ್ಮಾನಿಸಿದಳು. ನಾಳೆಯೆ ಬ್ಯಾಗೂರಿಗೆ ಹೋಗುವುದರ ಬಗ್ಗೆ ತಿರ್ಮಾನಿಸಿದಳು.
ಮನೆಗೆ ಬಂದ ಲಕ್ಷ್ಮಿ ತನ್ನ ತಲೆಯಲ್ಲಿ ಬಂದ ವಿಚಾರ ತಾಯಿಯ ಬಳಿ ಹೇಳಿದಾಗ, ರೇಣುಕಮ್ಮ ಸುತಾರಾಂ ಒಪ್ಪಲಿಲ್ಲ. ತಾನು ಇಲ್ಲಿಯ ವರೆಗೆ ಯಾರಲ್ಲು ಅಂದರೆ ರತ್ನಮ್ಮ ಆಗಲಿ ನಿಮ್ಮ್ ಪ್ರೋಪೆಸರ್ ಬಳಿ ಆಗಲಿ ನಿನ್ನ ಅಪ್ಪ ಸತ್ತಿದ್ದಾರೆ ಅಂತ ಹೇಳಿದ್ದೀನಿ ಹೊರತು ನಮ್ಮ ಕುಲದ ಬಗ್ಗೆ ಯಾರಲ್ಲು ಹೇಳಲಿಲ್ಲ, ದಯವಿಟ್ಟು ಎಲ್ಲಾ ಮುಗಿದು ಇನ್ನು ಒಳ್ಳೆ ಕಡೆ ಮದುವೆ ಆಗಿ ಹೋಗುವಾಗ ನಮ್ಮ ಹಳೆ ಪುರಾಣ ಕೆದಕೊಕ್ ಹೋಗ ಬೇಡ. ನನಗೆ ಈ ಊರಿಗೆ ಬಂದಾಗಲೆ ಗೊತ್ತಿತ್ತು ಎನಾದರು ತಲೆ ನೋವು ಶುರುವಾಗುವುದು ಎಂದು ತನ್ನ ಮನಸ್ಸಿನ ಭಾವನೆಯನ್ನು ಮಗಳಲ್ಲಿ ಹೇಳಿಕೊಂಡಳು. ಆದರೆ ಲಕ್ಷ್ಮಿ ಇದಕ್ಕೆ ಒಪ್ಪಲಿಲ್ಲ. ಲಕ್ಷ್ಮಿ ಅಮ್ಮನಿಗೆ ಸಮಾಧಾನ ಮಾಡುತ್ತ, ” ನೋಡಮ್ಮ ನೀನು ಹೇಗೆ ನನ್ನ ಆ ಊರಿನಿಂದ ಹೊರಗೆ ತಂದು ವಿದ್ಯಾವಂತೆ ಮಾಡಿದೀಯೋ, ನಾನು ಅಲ್ಲಿ ನನ್ನಂತಹ ಹೆಣ್ಣು ಮಕ್ಕಳಿಗೆ ಒಳ್ಳೆ ಜೀವನ ಕೊಡಿಸುತ್ತೇನೆ. ಮೊದಲು ಅವರನ್ನು ವಿದ್ಯಾವಂತರನ್ನಾಗಿ ಮಾಡಿ ಅವರಿಗೆ ಅವರ ಜೀವನ ಕಟ್ಟಿ ಕೊಳ್ಳಲು ಸಹಾಯ ಮಾಡುತ್ತೇನೆ. ನನಗೆ ಪ್ರೋಪೆಸರ್ ಸಿಕ್ಕಿ ಹೇಗೆ ಸಹಾಯ ಮಾಡಿದರೋ  ಹಾಗೆ ನಾನು ನಾಲ್ಕು ಜನರಿಗೆ ಉಪಯೋಗ ಆಗುವಂತ ಕೆಲಸ ಮಾಡುತ್ತೇನೆ. ದಯವಿಟ್ಟು ನನ್ನ ತಡಿಬೇಡ. ನಾನು ದೇವದಾಸಿ ಮಗಳು ಎಂದು ಹೇಳಿಕೊಳ್ಳಲು ನನಗೆ ಯಾವ ಮುಜುಗರ ಇಲ್ಲ. ಅಷ್ಟಕ್ಕು ನೀನು ಬೇಕು ಅಂತ ಆಗಿದ್ದೇನು ಅಲ್ಲ. ಆದರೆ ನೀನು ದೈರ್ಯ ಮಾಡಿ ಆ ಜಗತ್ತಿನಿಂದ ಹೊರಗೆ ಬಂದು ನನ್ನ ಬಚಾವ್ ಮಾಡಿದೆ. ನಾನು ಇಗ ನನ್ನ ಕೈಲಾದಷ್ಟು ಸಹಾಯ ಮಾಡುತ್ತೀನಿ. ಖಡಾಖಂಡಿತವಾಗಿ ತನ್ನ ತಡಿಬೇಡ ಅಂತ ಹೇಳಿದಳು. ರೇಣುಕಮ್ಮನಿಗೆ ಮಗಳ ಮಾತು ಕೇಳಿ ತಲೆ ಚಿಟ್ಟು ಹಿಡಿಯಿತು. ಇವಳಿಗೆ ಯಾಕ್ ಬೇಕಿತ್ತು ಅಂತ ಅನಿಸಿದರು  ಎಷ್ಟು ಜನ ಹೆಣ್ಣು ಮಕ್ಕಳು ದೇವದಾಸಿ ಪದ್ದತಿಗೆ ಬಲಿ ಆಗುತ್ತಿದ್ದಾರೊ ಎಂದು ಬೆಸರವಾಯಿತು. ಮಗಳಿಂದ ಸಹಾಯ ಅದರೆ ಆಗಲಿ ಮುಂದಿನ ಅವಳ ಮದುವೆ ಹೇಗೋ ಆ ಯಲ್ಲಮ್ಮನೆ ದಾರಿ ತೋರಿಸುವಳು ಎಂದು ನಿಟ್ಟುಸಿರು ಬಿಟ್ಟಳು.
ಇತ್ತ ಲಕ್ಷ್ಮಿ ತಾನು ಅಂದುಕೊಂಡಂತೆ ಬ್ಯಾಗೂರಿಗೆ ಹೋದಳು. ಅವಳಿಗೆ ಊರಿನ ನೆನಪು ಅಷ್ಟಾಗಿ ಇರಲಿಲ್ಲ. ಇನ್ನು ಊರಿನ ಜನರ ಒಬ್ಬರ ಗುರುತು ಇಲ್ಲವಾಗಿತ್ತು. ಅಲ್ಲಿನ ಪರಿಸ್ಥಿತಿ ನೋಡಿ ತುಂಬಾ ಬೆಸರ ಏನಿಸಿತು. ಮೂಲಭೂತ ಸೌಲಬ್ಯವು ಇಲ್ಲದೆ ಇದ್ದರು. ತಾನು ನಾಲ್ಕನೆ ಕ್ಲಾಸ್ ತನಕ ಕಲಿತ ಶಾಲೆ ಹಾಗೆ ಇತ್ತು. ಆದರೆ ಅಲ್ಲಿ ಯಾವ ಶಿಕ್ಷಕರು ಇಲ್ಲ. ಒಮ್ಮೆ ಊರನ್ನು ನೋಡಿ ಆ ಊರಿನ ಮುಖಂಡರ ಮನೆಗೆ ಹೋದಳು. ಲೇಡಿ ಕಮಿಶ್ನರ್ ಅಂತ ಗೊತ್ತಾದ ತಕ್ಷಣ ಒಳ್ಳೆ ಮರ್ಯಾದಿನೆ ದೊರಕಿತು. ಅವರ ಮಗ ಇವಳಿಗಿಂತ ಎರಡು ವರ್ಷ ದೊಡ್ಡವನು ಒಳ್ಳೆ ಪುಂಡನಾಗಿದ್ದ. ಅವನನ್ನು ಪೇಪರಿನಲ್ಲಿ ನೋಡಿದ್ದಳು.
ಲಕ್ಷ್ಮಿ ಈ ಊರಿನ ಮೂಲ ಸೌಕರ್ಯದ ಬಗ್ಗೆ ಮತ್ತು ಶಾಲೆಯ ಸುಧಾರಣೆ ಬಗ್ಗೆ ಹೇಳಿದಾಗ ಆ ಊರಿನ ಮುಖಂಡರು ಹೇಳಿದರು, “ ಎಲ್ಲ ಆಫೀಸರ್ ಬಂದ್ ಹೀಂಗ ಹೇಳ್ ಹೋತ್ತಾರಿ ಆಮ್ಯಾಲ್  ಫನ್ಡ್ ರೀಲೀಸ್ ಆದ್  ಮ್ಯಾಲ್  ಯಾರ್  ಈ ಕಡಿ ತಲಿನು ಹಾಕವಲ್ರಿ” ಅಂತ ವ್ಯಂಗವಾಗಿ ಹೇಳಿದರು. ಆಗ ಲಕ್ಷ್ಮಿ ಗಂಭಿರವಾಗಿ, “ಹಾಗೆನಿಲ್ಲ ನಾನೆ ಮುಂದೆ ನಿಂತು ಇಲ್ಲಿನ ಕೆಲಸ ನೋಡುತ್ತೇನೆ. ಅಂದ ಹಾಗೆ ಇನ್ನೋಂದು ವಿಚಾರ, ಇಲ್ಲಿ ಮೊನ್ನೆ ಯಾವುದೊ ಹುಡುಗಿಗೆ ದೇವದಾಸಿ ಆಗಲ್ಲ ಅಂದಿದ್ದಕ್ಕೆ ಒತ್ತಾಯ ಪೂರಕವಾಗಿ ಗೆಜ್ಜೆ ಕಟ್ಟಿ ಮೆರವಣಿಗೆ ಮಾಡಿದಿರಂತೆ.” ಅಂತ ಅವಳ ಮಾತು ಶುರು ಮಾಡಿದಾಗ, ಅಲ್ಲೆ ಇರುವ ಊರ ಮುಖಂಡರ ಮಗ, “ಏನ್ ಮಾಡೋದ್ ಅಕ್ಕೋರೆ  ಆಕಿ ಜಾತಿ  ಪದ್ದತಿ ಒಲ್ಲೆ ಅಂದ್ರ್ ಹ್ಯಾಂಗ್. ಆಕಿ  ಆಗಲ್ಲ್-ಹೋಗಲ್ಲ ಅಂದ್ರೆ, ನೋಡ್ರಿ  ನೀವು ಈ ಊರಿನ ಶಾಲಿ ಬೇಕಿದ್ರ ರಿಪೇರಿ ಮಾಡ್ರಿ, ರಸ್ತೆ ಬೇಕಿದ್ರ ರಿಪೇರಿ ಮಾಡ್ರಿ, ಆದ್ರ ಈ ಊರಿನ ಅಚಾರ-ಪದ್ದತಿ ಮ್ಯಾಲ್ ಹೇಳೋಕ್ ಬರ್ಬೇಡಿ”  ಅಂತ ಅಫೀಸರ್ ಅಂತ ನೋಡದೆ ಯಾವುದೋ ಹೆಂಗಸಿಗೆ ಹೇಳಿದಂತೆ ಹೇಳಿದ. ಆಗ ಲಕ್ಷ್ಮಿ ಗೆ ಪಿತ್ತ ಕೆಣಕಿತು. ಸ್ವಲ್ಪ ಖಾರವಾಗಿ “ನೀವ್ ಮಾತಾಡೊದ್ ಏನು, ದೇವರ ಹೆಸರಲ್ಲಿ ಮದುವೆ ಮಾಡಿಸಿ, ನಿಮಗೆ ಬಂದಂತೆ ಅವಳನ್ನು ಉಪಯೋಯಿಸಿಕೊಳ್ಳ ಬಹುದು ಅಂತಾನ? ನೋಡಿ ನಾನು ಇದನ್ನು ಖಂಡಿಸುತ್ತೇನೆ. ನಿಮ್ಮ ದಬ್ಬಾಳಿಕೆ ಇನ್ನು ನಡಿಯಲ್ಲ. ಅದು ಅಲ್ಲದೆ ಇಗ ಬೇಕಾದಷ್ಟು ಕಾನುನು ಬಂದಿವೆ ಇದಲ್ಲ ನನ್ನ ಹತ್ತಿರ ನಡೆಯುವುದಿಲ್ಲ. ಈ ದೇವದಾಸಿ ಪದ್ದತಿಯಿಂದ ಎಷ್ಟು ಜನ ಹೆಣ್ಣು ಮಕ್ಕಳು ಕಷ್ಟ ಪಟ್ಟಿದ್ದಾರೆ ಅಂತ ನನಗೆ ಗೊತ್ತು. “ ಎಂದು ರೋಶದಲ್ಲಿ ಹೇಳಿದಳು. ಅವಳ ಮಾತು ಕೇಳಿ ವಿಚಿತ್ರ ವೆನಿಸಿತು. ಇವಳಿಗೂ ದೇವದಾಸಿ ಗು ಏನೊ ಸಂಭಂದ ವೆಂದು ಯೋಚಿಸಿದರು. ಆದರೆ ರೇಣುಕಮ್ಮನಾಗಲಿ ಅವಳ ಮಗಳ ಬಗ್ಗೆ ಯಾಗಲಿ ಊರಲ್ಲಿ ಗೊತ್ತಿರಲಿಲ್ಲ. ರೇಣುಕಮ್ಮ ತನ್ನ ವೇಶವನ್ನು ಯಾವಾಗಲೊ ಬದಲಾಯಿಸಿದ್ದಳು. ಯಾರೊ ಬೆಂಗಳುರಿನ ಆಫೀಸರ್ ಎಂದು ಹೇಳುತ್ತಿದ್ದರೆ ಹೊರತು ಇವರ ಪೂರ್ವಾಪರ ಯಾರಿಗು ತಿಳಿದಿಲ್ಲ.
ಲಕ್ಷ್ಮಿ ತನ್ನ ಅಧಿಕಾರದಿಂದ ಬ್ಯಾಗೂರು ಮತ್ತು ಆಸು-ಪಾಸಿನ ಹಳ್ಳಿಗಳಲ್ಲಿ ಕೆಲವು ಬದಲಾವಣೆಯನ್ನು ತಂದಳು. ಮುಖ್ಯವಾಗಿ ಶಿಕ್ಷಣದ ವ್ಯವಸ್ಥೆ ಮಾಡಿದಳು. ಹೆಣ್ಣು ಕಲಿತರೆ ತನ್ನ ತಾನು ರಕ್ಷಿಸಿಕೊಳ್ಳುತ್ತಾಳೆ ಯಾರ ಸಹಾಯವು ಬೇಡ ಅಂತ ಅರಿತಿದ್ದಳು. ಪ್ರೋಪೇಸರ್ ಹೇಗೆ ಇವಳ ಶಿಕ್ಷಣಕ್ಕೆ ಮಹತ್ವ ಕೊಟ್ಟು ಇವಳನ್ನು ಮುಂದೆ ತಂದರೋ ಲಕ್ಷ್ಮಿಯು ಮುಖ್ಯವಾಗಿ ಹೆಣ್ಣು ಮಕ್ಕಳ  ಶಿಕ್ಷಣಕ್ಕೆ ಒತ್ತು ಕೊಟ್ಟು ಅಲ್ಲಿನ ವಾತಾವರಣವನ್ನು ಕ್ರಮೇಣವಾಗಿ  ಸುಧಾರಿಸುತ್ತ  ಬಂದಳು.
ಯಾವಾಗಲು ತಾನಾಗಲಿ ಅಥವಾ ಇನ್ನು ಯಾರೋ  ಜೊತೆಯಲ್ಲಿ ಇದ್ದು ಕಾಪಾಡಲು ಸಾದ್ಯವಿಲ್ಲ ವೆಂದು ತಾನೆ ತನ್ನನ್ನು ರಕ್ಷಿಸಿಕೊಳ್ಳುವಂತೆ ತಯಾರು ಮಾಡಿದಳು. ಪ್ರತಿ ವಾರ ಒಂದೊಂದು ಊರಲ್ಲಿ ಕ್ಯಾಂಪ್ ಮಾಡಿ ಶಿಕ್ಷಣ ಮತ್ತು ಸ್ವಾವಲಂಭಿಯಾಗಿ ಬದುಕುವುದರ ಬಗ್ಗೆ ಅರಿವು ಮೂಡಿಸುತ್ತಿದ್ದಳು. ಇದಕ್ಕೆ ಊರಿನ ಮುಖಂಡರ ಮತ್ತು ಇಗಿನ ತರುವಾಯದ ಗಂಡು ಮಕ್ಕಳ ತರಹ-ತರಹ ವಿರೋಧ ತೋರಿಸಿದರು. ಅವರ ಯಾವ ಚಿಲ್ಲರೆ ಪ್ಲಾನ್ ಕೂಡ ಲಕ್ಷ್ಮಿಯ ಬಳಿ ನಡೆಯಲಿಲ್ಲ.
ಕ್ರಮೇಣ ದೇವದಾಸಿ ಜನಾಂಗದಲ್ಲಿ ಸುಧಾರಣೆ ಕಂಡವು. ಕೆಲವು ಹೆಣ್ಣು ಮಕ್ಕಳು ಲಕ್ಷ್ಮಿಯ ಸಹಾಯ ಮತ್ತು ಮಾರ್ಗದರ್ಶನದಲ್ಲಿ ಖೌದಿ ಹೊಲಿಯುವುದು, ಬಟ್ಟೆ ಹೊಲಿದು ಕೊಡುವುದು, ಕೈ ಕಸುತಿ, ಹೀಗೆ ಒಂದು ಸಣ್ಣ ಪ್ರಮಾಣದ ಉದ್ದಿಮೆ ಶುರು ಮಾಡಲು ಮುಂದಾದರು. ಅದಕ್ಕೆ ಬೇಕಾಗುವ ಹೊಲಿಗೆ ಮೇಶಿನ್ ಸರಕಾರದಿಂದ ಲಕ್ಷ್ಮಿ ಅವರಿಗಾಗಿ ತರಿಸಿ ಕೊಟ್ಟಳು. ಇದರ ಉದ್ಘಾಟನೆಗೆ ಲಕ್ಷ್ಮಿನೆ ಬರಬೇಕು ಎಂದು ಅಲ್ಲಿನ ಹೆಂಗಸರು ಮತ್ತು ಹಣ್ಣುಮಕ್ಕಳ ಆಸೆ ಆಗಿತ್ತು. ಲಕ್ಷ್ಮಿ ಮತ್ತು ಅವಳ ಕುಟುಂಬ ಸಮೇತ ಆ ದಿನ ಬರಬೇಕು ಎಂದು ಎಲ್ಲರು ಒತ್ತಾಯ ಪೂರ್ವಕ ಕರೆದರು.  ಇದಕ್ಕೆ ಲಕ್ಷ್ಮಿ ಒಪ್ಪಿಕೊಂಡು ಬರುವುದಾಗಿ ಹೇಳಿದಳು.
ಇತ್ತ ಲಕ್ಷ್ಮಿ ರೇಣುಕಮ್ಮನನ್ನು ಬ್ಯಾಗೂರಿಗೆ ಬರಲು ಒಪ್ಪಿಸಿದಳು. ರೇಣುಕಮ್ಮನಿಗೆ ಮೊದಲು ಸ್ವಲ್ಪ ಹೆದರಿಕೆ ಇದ್ದರು ಮಗಳ ದೈರ್ಯ ಮತ್ತು ಅವಳು ಮಾಡುವ ಕೆಲಸದ ಮೇಲೆ ಹೆಮ್ಮೆ ಇತ್ತು. ಯಾರು ತನ್ನ ಗುರುತಿಸದೆ ಇದ್ದರು ತಾನೆ ತನ್ನ ಪರಿಚಯದವರು ಸಿಕ್ಕರೆ ಗುರುತಿಸಿ ಮಾತಾಡಬೇಕು, ತನ್ನ ಮಗಳು ಎಂದು ಹೆಮ್ಮೆಯಿಂದ ಹೇಳಬೇಕು ಅಂತ ನಿರ್ಧರಿಸಿದಳು.
ಉದ್ಘಾಟನೆಯ ದಿವಸ ಲಕ್ಷ್ಮಿ ಮತ್ತು ರೇಣುಕಮ್ಮ ಬ್ಯಾಗೂರಿಗೆ ಹೊರಟರು. ಲಕ್ಷ್ಮಿ ಸೀರೆ ಉಟ್ಟು ಸಾಕ್ಷಾತ್ ಲಕ್ಷ್ಮಿ ತರನೆ ಕಾಣಿಸುತ್ತಿದ್ದಳು. ರೇಣುಕಮ್ಮ ಕೆಂಪು ಪಟ್ಟೆ ಸೀರೆ ಮತ್ತು ಕೂದಲು ತೆಗೆದ ತಲೆಗೆ ಸೆರಗನ್ನು ಹೊದ್ದಿದ್ದಳು. ಮಗಳು ಎಷ್ಟೇ ಹೇಳಿದರು ಈ ರೂಪವನ್ನು ಅವಳು ಬದಲಾಯಿಸಿಕೊಂಡಿರಲಿಲ್ಲ.
ಉದ್ಘಾಟನೆಯನ್ನು ಅಲ್ಲೆ ಶಾಲೆಯ ಪಕ್ಕದ ಕೋಲಿಯಲ್ಲಿ ಮಾಡಿದ್ದರು. ಅವರ ಅನುಕೂಲ ತಕ್ಕಂತೆ ಅದೊಂದು ಪುಟ್ಟ ಕಾರ್ಯಕ್ರಮವಾಗಿತ್ತು. ಅಲ್ಲಿ ದೇವದಾಸಿ ಗುಂಪಿನದೆ ಹೆಣ್ಣು ಮಕ್ಕಳಾಗಿದ್ದರು. ಅಲ್ಲಿಯೆ ಇದ್ದ ಆಸು ಪಾಸಿನ ಊರವರು ಇದ್ದರು. ಕೂತುಹಲಕ್ಕೆ ಊರಿನ ಕೆಲವರು ಬಂದಿದ್ದರು. ಲಕ್ಷ್ಕಿ ತಾನೆ ಪೇಪರಿನವರಿಗೆ ಹೇಳಿ ಕಳಿಸಿದ್ದಳು. ಉದ್ಘಾಟನೆ ಪ್ರಾರಂಭವಾಯಿತು. ಯಾವಾಗ ಲಕ್ಷ್ಮಿಯ ಹತ್ತಿರ ಎರಡು ಮಾತಾಡಲು ಹೇಳಿದರೊ ಲಕ್ಷ್ಮಿ ಮಾತಾಡುತ್ತ ಎಲ್ಲರ ಮುಂದೆ ತನ್ನ ತಾಯಿಯನ್ನು ಪರಿಚಯಿಸಿ ತಾವು ಊರು ಬಿಟ್ಟು ತನ್ನ ಐ.ಎ,ಎಸ್ ಮಾಡಿರುವ ತನಹ ಹೇಳಿದಳು. ಅವಳು ದೈರ್ಯವಾಗಿ ಎಲ್ಲರ ಮುಂದೆ,”ತಾನು ದೇವದಾಸಿಯ ಮಗಳೆ ಈ ಕ್ರೂರ ಪ್ರಪಂಚದಿಂದ ನನ್ನ ಅಮ್ಮ ನನ್ನ ಹೊರ ತಂದಳು. ಈಗ ನಾನು ನನ್ನ ಕೈಲಾದ ಸಹಾಯ ಮಾಡುತ್ತೇನೆ” ಅಂದಳು. ಅಲ್ಲಿ ನೇರದಿದ್ದ ಕೆಲವು ಹೆಂಗಸರಿಗೆ ರೇಣುಕಮ್ಮನ ನೆನಪು ಇತ್ತು. ಅವಳ ಗುರುತಿಸಲಾಗದೆ ಇದ್ದರು. ಅಲ್ಲಿರುವವರಿಗೆ ಇವರ ಕಥೆ ಹೇಳಿ ಕಣ್ಣಲ್ಲಿ ನೀರು ತುಂಬಿತು.
ಮರುದಿನ ಪೇಪರಲ್ಲಿ ಇವಳ ಬಗ್ಗೆ ಒಂದು ಆರ್ಟಿಕಲ್ ಬಂತು. ಇದನ್ನು ಬ್ಯಾಗೂರು ಮತ್ತು ಅಸುಪಾಸಿನವರು  ರೇಣುಕಮ್ಮನ ದಿಟ್ಟತನ ನೋಡಿ ಕೊಂಡಾಡಿದರು. ಇನ್ನು ಕೆಲವರು ಕರುಬಿದರು. ಆದರೆ ದೇವದಾಸಿ ಪಂಗಡದ ಹೆಣ್ಣು ಮಕ್ಕಳು ಮತ್ತು ತಾಯಂದಿರು ಮಾತ್ರ ಲಕ್ಷ್ಮಿಯನ್ನು ದೇವತೆ ತರ ನೋಡಿದರು. ತಾನು ಕಲಿತು ತಮ್ಮನ್ನು ಈ ಅನಿಷ್ಟ ಪದ್ದತಿಯಿಂದ ಹೊರಗೆ ತಂದಿದ್ದಕ್ಕೆ ಅವಳನ್ನು ತಮ್ಮ ಪಾಲಿನ ದೇವರು ಎಂದು ಪರಿಗಣಿಸಿದರು. ಕೆಸರಲ್ಲಿ ಹುಟ್ಟಿದ ಕಮಲ ಆದಳು.





                                           

No comments: