Tuesday, March 12, 2019

ಪುಟ ತಿರುವಿದಾಗ...


                                                  ಪುಟ ತಿರುವಿದಾಗ….. 

ಶ್ರೀನಿವಾಸ ರಾಯರದ್ದು ದೊಡ್ಡ ಮನೆತನ. ಮೊದಲಿನಿಂದಲು ಶ್ರೀಮಂತಿಕೆ ನೋಡಿದವರು. ಅದಕ್ಕನುಗುಣವಾಗಿ ಗರ್ವ, ದರ್ಪ, ಅವರಿಗೆ ಮನೆತನದಿಂದ ಬಂದ ಬಳುವಳಿಯಾಗಿತ್ತು. ಎರಡು ಹೆಣ್ಣು ಮಕ್ಕಳ ನಂತರ ಸುಬ್ರಮಣ್ಯ ಸ್ವಾಮಿಯ ಹರಕೆ ಹೊತ್ತು ಹುಟ್ಟಿದವನೆ ಸುಬ್ರಮಣ್ಯ. ಅಕ್ಕಂದಿರ ಪ್ರೀತಿಯ ತಮ್ಮ, ಸಾವಿತ್ರಮ್ಮನ ಪ್ರೀತಿಯ ಮಗ. ತಂದೆಯ ಹೆಮ್ಮೆಯ ತಮ್ಮ ಮನೆ ನಡೆಸುಕೊಂಡು ಹೋಗುವ ವಾರಸ್ತುದಾರ. ಶ್ರೀನಿವಾಸರ ತಾಯಿ ಮೊಮ್ಮಗನನ್ನು ಅಪ್ಪಟ ಬಂಗಾರದಂತೆ ಕಾಣುತ್ತಿದ್ದಳು.
ಎಲ್ಲರ ಪ್ರೀತಿ ವಾತ್ಸಲ್ಯದಿಂದ  ಬೆಳೆದ ಸುಬ್ರಮಣ್ಯ ಪಕ್ಕ ಅಮ್ಮನ ಮಗನಾಗಿ ಸಾವಿತ್ರಮ್ಮನ ಗುಣವನ್ನೆ ಮೈ ಗೂಡಿಸಿಗೊಂಡ. ಮೊದ-ಮೊದಲು ಶಾಲೆಗೆ ಹೋಗಲು ಹಿಂದೇಟು ಹಾಕ್ತಾ ಇದ್ದ. ಅಮ್ಮನ ಹತ್ತಿರ ಹೋಗಿ ಅಡಗಿಕೊಳ್ಳುತ್ತಿದ್ದ. ಆಗ ಅವನ ಅಜ್ಜಿ,” ಈ ಮನೆಗೆ ಅವನೊಬ್ಬನೆ ಮಗ ಅವನಿಗೇಕೆ ಓದು? ವ್ಯವಹಾರ ಮಾಡುವಷ್ಟು ಜ್ಞಾನ ಇದ್ದರೆ ಸಾಕು” ಎಂದು ಹೇಳುತ್ತಿದ್ದರು. ಅಪ್ಪ-ಅಮ್ಮನು ಮಗನೇನು ನೌಕರಿ ಮಾಡಬೇಕೆಂದಿಲ್ಲ ಇರೋ ಆಸ್ತಿ ನೋಡಿಕೊಂಡರೆ ಸಾಕು ಎಂದು ಹೇಳುತ್ತಿದ್ದರು. ಇವೆಲ್ಲದರ ಪರಿಣಾಮ ಸುಬ್ರಮಣ್ಯ ಓದಿನ ವಿಷಯದಲ್ಲಿ ಸ್ವಲ್ಪ ಹಿಂದೇಟು ಹಾಕಿದ. ಅಕ್ಕಂದಿರ ಜೊತೆ ಹೇಗೊ ಹತ್ತನೆ ತರಗತಿಯ ವರೆಗೆ ಓದಿದ. ಕಾಲೇಜ್ ಗೆ ಬೇರೆ ಊರಿಗೆ ಮಗನ ಕಳಿಸಿಕೊಡುವ ಮನಸ್ಸು ಅಪ್ಪ-ಅಮ್ಮನಿಗೂ ಇಲ್ಲವಾಗಿತ್ತು. ಸುಬ್ರಮಣ್ಯನಿಗೂ ಇಲ್ಲವಾಗಿತ್ತು. ಕೃಷಿಯಲ್ಲಿ ಮಾತ್ರ ಆಸಕ್ತಿ ಇತ್ತು.  ತಮ್ಮ ಎರಡು ಹೆಣ್ಣು ಮಕ್ಕಳನ್ನು ಸಣ್ಣ ವಯಸ್ಸಿಗೆ ಒಳ್ಳೆ ಕಡೆ ಮದುವೆ ಮಾಡಿ ಸೇರಿಸಿದ್ದರು. ಅವರು ಅಮ್ಮನ ತರವೆ ಅಚ್ಚುಕಟ್ಟಾಗಿ ಸಂಸಾರ ಮಾಡಿಕೊಂಡಿದ್ದರು.  ಇತ್ತ ಮಗನು ತಮ್ಮ ತೋಟದ ಬೆಸಾಯದಲ್ಲಿ ತೊಡಗಿಕೊಂಡ. ಹೊಸ ಹೊಸ ಕೃಷಿಯ ಬಗ್ಗೆ ತಿಳಿದುಕೊಂಡು ಬೆಸಾಯ ಜಾನುವಾರುಗಳು ಹೀಗೆ ಹಳ್ಳಿ ಜೀವನಕ್ಕೆ ತನ್ನನ್ನು ತೊಡಗಿಸಿಕೊಂಡ. ಕೃಷಿ ಮತ್ತು ಮನೆ ಮಾಡಿಕೊಂಡು ಹೋಗುವುದರಲ್ಲಿ ಅವನಿಗೆ ಖುಶಿ ಇತ್ತು. ವಿದ್ಯೆ ಕೈ ಕೊಟ್ಟರು ಭೂಮಿ ತಾಯಿ ಅವನ ಕೈ ಬಿಡಲಿಲ್ಲ. ಇವನು ಅದನ್ನೆ ನಂಬಿ ಇದ್ದ. ಯವುದು ಅಡ್ಡ ಚಟ ಇಲ್ಲದೆ ಅಮ್ಮನ ಮುದ್ದುನ ಮಗನಾಗಿ ಇದ್ದ. ಇದು ಅಪ್ಪ-ಅಮ್ಮನಿಗೂ ತುಂಬಾ ಖುಶಿಯಾಗಿತ್ತು. ಸಾವಿತ್ರಮ್ಮ ಕೆಲವೊಮ್ಮೆ ಹೇಳ್ತಾ ಇದ್ದರು..”ನಿಮ್ಮ ಅಜ್ಜಿ ಇದ್ದರೆ ನಿನ್ನ ಕಣ್ಣಲ್ಲಿ ಹಾಕಿ ಮುಚ್ಚ್ ಗೊಳ್ಳ್ ತಾ ಇದ್ದರು” ಅಂತ. ತಮ್ಮ ಹೆಣ್ಣು ಮಕ್ಕಳನ್ನು ತಮಗೆ ಸಮನಾದ ಸಂಭಂದವನ್ನು ಮಾಡಿದ ಹಾಗೆ ಮಗನಿಗೂ ಒಳ್ಳೆ ಕಡೆಯಿಂದ ಹೆಣ್ಣು ತರುವ ಯೋಚನೆ ಮಾಡಿದರು. ಇರೋ ಒಂದೇ ಮಗನ ಮದುವೆ ಚನ್ನಾಗಿ ಮಾಡಿ ಮೊಮ್ಮಕ್ಕಳನ್ನು ನೋಡುವ ಆಸೆ. ಮದುವೆ ವಯಸ್ಸಿಗೆ ಬಂದ ಸುಬ್ರಮಣ್ಯ ಕೂಡ ಮದುವೆಗೆ ಏನು ಅಡ್ಡಿ ಮಾಡಲಿಲ್ಲ. ಸಾವಿತ್ರಮ್ಮನಿಗೆ ಸಡಗರ. ಹೆಣ್ಣು ಮಕ್ಕಳ ಮದುವೆ ಆದ ಮೇಲೆ ಮನೆ ಎಕೋ ಬಣ-ಬಣ ಅನ್ನಿಸುತಿತ್ತು. ಸೊಸೆಯನ್ನು ಅಪ್ಪಟ ಮಗಳಂತೆ ನೋಡಿಕೊಳ್ಳುವ ಅತ್ತೆ, ಚಿನ್ನದಂತ ಮಗ. ರಾಯರು ಬೇರೆಯವರ ಹತ್ತಿರ ಎಷ್ಟೇ ದರ್ಪ ತೋರಿಸಿದರು ಮನೆಗೆ ಬಂದ ಸೊಸೆಗೆ ಯಾವ ಕಷ್ಟ ಕೊಡುವ ಮನುಷ್ಯನಲ್ಲ. ತಮ್ಮ ದೊಡ್ಡಸ್ತಿಕೆ ಪ್ರದರ್ಶನಕ್ಕೆಂದೆ ಸೊಸೆಗೆ ಬೇಕಾದಷ್ಟು ಬಂಗಾರ ಮಾಡಿಸುವವರು. ಒಟ್ಟಿನಲ್ಲಿ ತಮ್ಮ ಮನೆಗೆ ಜಾತಕ ಕೊಡಲು ಜನ ತಾ ಮುಂದು ಅಂತ ಬರ್ತಾರೆ ಅಂತ  ರಾಯರ ಮತ್ತು ಇವರ ಹೆಂಡತಿಯ ಲೆಕ್ಕಚಾರ. ಸುಬ್ರಮಣ್ಯ ಯಾವುದಕ್ಕು ತಲೆ ಕೆಡಿಸಿಕೊಳ್ಳದೆ ತನ್ನ ಪಾಡಿಗೆ ಕೆಲಸದಲ್ಲಿ ತೊಡಗಿದ್ದ.
ಸಾವಿತ್ರಮ್ಮ ತಮ್ಮ ಮಗನ ಮದುವೆ ಮಾಡುವ ವಿಚಾರವನ್ನು ತಮ್ಮ ನೆಂಟರಿಷ್ಟರಲ್ಲಿ ಹಾಗೆ ಪರಿಚಯದವರಲ್ಲಿ ಹೇಳಿದರು. ಎಲ್ಲರ ಬಳಿಯು ,”ಒಳ್ಳೆ ಹುಡುಗಿ ತಮ್ಮ ಮನೆಗೆ ಹೊಂದಿಕೊಂಡು ಮನೆ ಮಾಡಿಕೊಂಡು ಹೋಗುವ ಹುಡುಗಿ ಇದ್ದರೆ ಸಾಕು” ಎನ್ನುತ್ತಿದ್ದರು. ತಮ್ಮ ಮಗನಿಗೆ ಇನ್ನೆಷ್ಟು ಹುಡುಗಿಯರ ಜಾತಕ ಬರುವುದೊ ಎಂದು ಎಣಿಸಿದ ರಾಯರಿಗೆ ಮತ್ತು ಸಾವಿತ್ರಮ್ಮನಿಗೆ ಸ್ವಲ್ಪ ನಿರಾಶೆ ಆಯಿತು. ಸುಬ್ರಮಣ್ಯ ಯಾವುದಕ್ಕು ತಲೆ ಕೆಡಿಸಿಕೊಳ್ಳದೆ ತನ್ನ ಕೃಷಿಯಲ್ಲಿ ತೊಡಗಿದ. ಮೊದಲಿನಿಂದಲು ಅಮ್ಮ-ಅಕ್ಕಂದಿರ ಜೊತೆ ಮುದ್ದಾಗಿ ಬೆಳೆದ ಸುಬ್ರಮಣ್ಯ ಸಂಕೋಚ ಸ್ವಭಾವದವನು. ವಯಸ್ಸಿಗೆ ತಕ್ಕ ಆಕರ್ಷಣೆ ಹೊರತು ಯಾವಾಗಲು ಯಾವ ಹುಡುಗಿಯರ ಹಿಂದೆ ಹೋದವನಲ್ಲ. ಹೆಣ್ಣು ಮಕ್ಕಳ ಭಾಷೆಯಲ್ಲಿ ಹೇಳೊದಾದರೆ ಜೊಲ್ಲು ಪಾರ್ಟಿ ಅಲ್ಲ.
ಸಾವಿತ್ರಮ್ಮನವರಿಗೆ ನಿರಾಶೆ ಜೊತೆ ಹೆದರಿಕೆ ಶುರುವಾಯಿತು. ನಮ್ಮ ಸಮಾಜದ ಹೆಣ್ಣು ಮಕ್ಕಳ ಕೊರತೆ ಮತ್ತು ಮನೆಯಲ್ಲಿ ಇರೋ ಗಂಡು ಮಕ್ಕಳ ಒಪ್ಪದೆ ನೌಕರಿ ಮತ್ತು ಶಹರದ ಆಸೆ ಪಡುವುದನ್ನು ಅವಳ ಗಮನಕ್ಕೆ ಬಂತು.   ಹಳ್ಳಿಯಲ್ಲಿ ಇರೋ ಗಂಡು ಮಕ್ಕಳ ಮದುವೆ ಆಗ್ದೆ ಇರೋ ದನ್ನು ಗಮನಿಸಿದ್ದಳು. ಆದರೆ ತಮ್ಮ ಮನೆಗೆ ಆ ಸಮಸ್ಯೆ ಬರುವುದಿಲ್ಲ ಎಂದು ಎಣಿಸಿದ್ದಳು. ಆದರೆ ಅವರ ಲೆಕ್ಕಚಾರ ತಲೆ ಕೆಳಗಾಯಿತು. ತನ್ನ ಮನಸ್ಸಿನಲ್ಲಿನ ಹೆದರಿಕೆಯನ್ನು ತೊರಿಸಿಕೊಳ್ಳದೆ ಎಲ್ಲರ ಹತ್ತಿರ “ ನಮ್ಮ ಮನೆಗೆ ಸೊಸೆ ಆಗಿ ಬರುವವಳು ಅದೃಷ್ಟ ಮಾಡಿರ ಬೇಕು. ಎಲ್ಲಿದ್ದಾಳೊ ಏನೋ? “ ಎನ್ನುತ್ತಿದ್ದರು. ಹೀಗೆ ತನ್ನ ಮನೆಯ ಹಾಗೂ ಮಗನ ಗುಣಗಾನ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ನೌಕರಿ ಮತ್ತು ಶಹರದ ಜೀವನದ ಬಗ್ಗೆ ಏನಾದರು ಕೊಂಕು ಹೇಳಿತ್ತಿದ್ದಳು. ಊರಲ್ಲಿ ಅನುಕೂಲಸ್ಥರ ಮನೆಗೆ ಮಗಳನ್ನು ಕೊಟ್ಟರೆ ಸುಖದಿಂದ ಇರ್ತಾರೆ, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂದು ಹೆಣ್ಣು ಮಕ್ಕಳ ಅಮ್ಮಂದಿರ ಮುಂದೆ ಹೇಳುತ್ತಿದ್ದರು.ಆದರೆ  ಶ್ರೀನಿವಾಸ ರಾಯರು ಮಾತ್ರ ಅಪ್ಪಿ ತಪ್ಪಿಯು ಯಾರ ಹತ್ತಿರವೂ ತಮ್ಮ ಮಗನಿಗೆ ಜಾತಕ ಬರ್ತಾ ಇಲ್ಲ ಅಂತ ಎಲ್ಲೂ ಹೇಳಲಿಲ್ಲ. ಎಲ್ಲು ತಮ್ಮ ದೊಡ್ಡಸ್ಥಿಕೆಗೆ ಕುಂದು ಬರದ ಹಾಗೆ, “ಯಾಕೋ ಒಂದು ಜಾತಕವು ಕೂಡ್ ಬರ್ತಾ ಇಲ್ಲ. ಅದು ಅಲ್ದೆ ನಮ್ಮ ಮಗನಿಗೆನು  ತುಂಬಾ ವರ್ಷ ಆಗಿಲ್ಲ. ಸರಿಯಾದ ಹುಡುಗಿ ಸಿಗಲಿ. ಏನೋ ಮುಂದಿನ ವರುಷ ಗುರು ಬಲ ಚನ್ನಾಗಿ ಇದಿಯಂತೆ”, ಅಂತ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುತ್ತಿದ್ದರು. ಏನೆ ಹೇಳಿದರು ರಾಯರಿಗೆ ಮಗನ ಮದುವೆ ಚಿಂತೆ ಒಳ-ಒಳಗೆ ಇತ್ತು. ಸಾವಿತ್ರಮ್ಮನೋ ದಿನ ಮಗನ ಮದುವೆ ವಿಚಾರ ಹೇಳಿ-ಹೇಳಿ ಗಂಡನಿಗೆ ಇನ್ನು ತಲೆ ಚಿಟ್ಟು ಹಿಡಿಸುತ್ತಿದ್ದರು.  ಸುಬ್ರಮಣ್ಯ ಮಾತ್ರ ಯವುದನ್ನು ತಲೆ ಹೆಡಿಸಿಕೊಳ್ಳದೆ ಅಪ್ಪ- ಅಮ್ಮನಿಗೆ ಸಮಾಧಾನ ಹೇಳುತ್ತಿದ್ದ. ಅತ್ತ ಸುಬ್ರಮಣ್ಯನ ಅಕ್ಕಂದಿರು ತಮ್ಮನ ಮದುವೆಗೊಸ್ಕರ ತಮ್ಮ ಬಳಗದವರ ಹತ್ತಿರ ವಿಚರಿಸುತ್ತ ಇದ್ದರು. ಆದ್ರೆ ಯಾಕೋ ಕಂಕಣ ಬಲ ಕೂಡಿ ಬರಲೆ ಇಲ್ಲ.
ಒಮ್ಮೆ ರಾಯರು ತೋಟದಿಂದ ಮನೆಗೆ ಬರುವಾಗ ಅಲ್ಲೆ ಬಾವಿ ಕಟ್ಟೆಯ ಮೇಲೆ ಕುಳಿತರು. ಸ್ವಲ್ಪ ಸುಸ್ತಾಗಿತ್ತು. ಸುಮ್ಮನೆ ಯಾವೊದೋ ಯೋಚನೆಯಲ್ಲಿ ಮುಳುಗಿದರು. ಹೀಗೆ  ತಮ್ಮ ಗತ ಕಾಲದ ಜೀವನದ ಪುಟ ತುರುವಿದಾಗ…………………..
ಶ್ರೀನಿವಾಸ ರಾಯರು ಮೊದಲು ಮೋಜಿನ ಮನುಷ್ಯನಾಗಿದ್ದ. ಅವರ ಅಪ್ಪ ದೊಡ್ಡ ಪುರೊಹಿತರು ಮತ್ತು ಒಳ್ಳೆ ಜಮೀನು ಉಳ್ಳವರಾಗಿದ್ದರು. ಆರು ಜನ ಹೆಣ್ಣು ಮಕ್ಕಳ ನಂತರ ಹುಟ್ಟಿದ ಶ್ರೀನಿವಾಸನಿಗೆ ಸ್ವಲ್ಪ ಅತಿಯಾದ ಪ್ರೀತಿ ಸಿಗುತಿತ್ತು. ಮಗ ಏನ್ ಮಾಡಿದರು ಚಂದವೆ. ಮಗನಿಗೆ ಸ್ವಲ್ಪ ಸಲುಗೆ ಮತ್ತು ಸ್ವಾತಂತ್ರ ಇತ್ತು. ಇದೇ  ಅವರ ದರ್ಪಕ್ಕೆ ಮತ್ತು ಮೋಜಿಗೆ ಕಾರಣವಾಯಿತು. ಅದು ಅಲ್ಲದೆ ಶ್ರೀನಿವಾಸ ಯೌವನದಲ್ಲಿ ಹೆಣ್ಣು ಮಕ್ಕಳ ವಿಷಯದಲ್ಲಿ ಸಡಿಲವಾಗಿದ್ದರು. ಇದು ಸ್ವಲ್ಪ ಮಿತಿ ಮೀರಿತ್ತು. ಆದ್ರು ಯಾರು ಅವರ ಮನೆಯ ವಿಷಯ ಉಸಿರು ಬಿಡುತ್ತಿರಲ್ಲಿಲ್ಲ.
ಶ್ರೀನಿವಾಸ  ತೋಟದ ಕೆಲಸವನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದ. ತಂದೆ ಪುರೋಹಿತ್ಯಕ್ಕೆ ಬೇರೆ ಊರಿಗೆ ಹೋದಾಗ ಚಿಕ್ಕ ವಯಸ್ಸಿನಲ್ಲೆ ಮನೆಯ ಯಜಮಾನಿಕೆ  ಮತ್ತು ಆಳುಗಳ ಹತ್ತಿರ ಕೆಲಸ ಹೇಳಿ ಕೆಲಸ ಮಾಡಿಸುವ  ತಾಕತ್ತು ಮತ್ತು ಬುದ್ದಿವಂತಿಕೆ ಇತ್ತು. ಇದು ಶ್ರೀನಿವಾಸರ ಅಪ್ಪ-ಅಮ್ಮನಿಗೆ ಹೆಮ್ಮೆಯ ವಿಷಯವಾಗಿತ್ತು. ತೋಟದ ಕೆಲಸಕ್ಕೆ ಆಳುಗಳು ಬರುವಾಗ ತಮ್ಮ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಕರೆದು ಕೊಂಡು ಬರುತ್ತಿದ್ದರು. ಆಗ ವಿದ್ಯೆಗೆ ಮಹತ್ವ ಇಲ್ಲ. ತಾವು ಮಾಡುವ ತೋಟದ ಕೆಲಸ ಕಲಿತು ಮುಂದೆ ಮದುವೆ ಆದ ಮೇಲೆ ಗಂಡನ ಮನೆಯಲ್ಲಿ ಅದು ಪ್ರಯೋಜನಕ್ಕೆ ಬರಲಿ ಎಂದು. ಆಗ ಬಂದವಳೆ ಗಂಗೆ. ಪ್ರಾಯಕ್ಕೆ ಬಂದ ಗಂಗೆ ತನ್ನ ತಾಯಿಯ ಜೊತೆ ಶ್ರೀನಿವಾಸರ ಮನೆಯ ತೋಟದ ಕೆಲಸಕ್ಕೆ ಬರುತ್ತಿದ್ದಳು. ವಯಸ್ಸಿಗೆ ತಕ್ಕ ಬೆಳವಣಿಗೆ, ಸ್ವಲ್ಪ ಎಣಗಪ್ಪಾದರು ಎದ್ದು ಕಾಣುವ ಅವಳ ಮೈ-ಮಾಟ, ಕಪ್ಪನೆಯ ಉದ್ದ ಜಡೆ, ಆಕರ್ಷಕ ಕಪ್ಪು ಬಟ್ಟಲು ಕಣ್ಣು. ಸ್ವಲ್ಪ ಹೆಂಗರಳಾದ ರಾಯರಿಗೆ ಗಂಗಿ ಯ ಮೇಲೆ ವಯಸ್ಸಿನ ಆಕರ್ಷಣೆ ಶುರುವಾಯಿತು. ಮೊದಮೊದಲು ಅವಳನ್ನು ನೀರು ಬಿಡಲು ಕರೆಯುವುದು, ಭತ್ತದ ಚೀಲ ಹಿಡಿಯಲು ಕರೆಯುವುದು, ಹೀಗೆ ಗಂಗಿ ಯನ್ನು ತಮ್ಮ ಸಾಮಿಪ್ಯಕ್ಕೆ ಕರೆದು ಅವಳ ಜೊತೆ ಸಲುಗೆಯಿಂದ ಮಾತಾಡುತ್ತಿದ್ದರು. ಪ್ರಾಯಕ್ಕೆ ಬಂದ ಗಂಗಿಯು ಯಜಮಾನರಲ್ಲಿ ಏನೋ ಸಲುಗೆ. ಇದು ಬೇರೆ ಕೆಲಸದವರಿಗೆ ತಿಳಿದ ವಿಷಯವೆಯಾಗಿತ್ತು. ಯಜಮಾನ ಕೆಲಸಕ್ಕೆ ಬಂದ ಹೆಂಗಸರ ಜೊತೆ ಸಂಭಂದ ಇಟ್ಟುಗೊಳ್ಳುವ ವಿಷಯ ವಿಶೇಷವೆನಲ್ಲ. ಇದು ಸಹಜವಾಗಿತ್ತು. ಯಜಮಾನನಿಂದ ಭೂವ್ಯಾಜ್ಯ , ಹಣಕಾಸು ಹೀಗೆ ಅನೇಕ ಸಹಾಯ ಪಡೆಯುತ್ತಿದ್ದರು. ಗಂಗೆ ಮತ್ತು ಶ್ರೀನಿವಾಸ ರಾಯರ ಮದ್ಯೆ ಗೆಳೆತನ ಬೆಳೆಯಿತು. ಅಷ್ಟರಲ್ಲೆ ಗಂಗಿಯ ತಾಯಿಗೆ ಆರೋಗ್ಯದ ಸಮಸ್ಯೆ ಶುರುವಾಯಿತು. ಇದಕ್ಕೆ ಗಂಗಿ ಯಜಮಾನರ ಮನೆಯಲ್ಲಿ ಹಣಕಾಸಿನ ಸಹಾಯ ಪಡೆದಳು. ಇದಕ್ಕೆ ಪ್ರತಿಫಲವಾಗಿ ಶ್ರೀನಿವಾಸ ರಾಯರು ಗಂಗಿಯ ದೇಹ ಸಂಪರ್ಕ ಬಯಸಿದರು. ಇದಕ್ಕೆ ಗಂಗಿ ನಿರಾಕರಿಸಲಿಲ್ಲ. ಇಬ್ಬರು ತೋಟದ ಬಾವಿಯ ಹಿಂದೆ ಸಂಧಿಸುತ್ತಿದ್ದರು. ಇದರ ಪರಿಣಾಮ ಗಂಗಿ ಯ ಹೊಟ್ಟೆಯಲ್ಲಿ ಇನ್ನೊಂದು ಜೀವ ಮೊಳಕೆಯೊಡೆಯಿತು.  ಈ ವಿಷಯವನ್ನು ಗಂಗಿ ಶ್ರೀನಿವಾಸರಲ್ಲಿ ಹೇಳಿಕೊಂಡಳು. ರಾಯರು  ಏನೋ ಹಾರಿಕೆ ಉತ್ತರ ಕೊಟ್ಟರು. ರಾಯರಿಗೆ ತಿಳಿದಿತ್ತು ಗಂಗಿ ಮತ್ತು ತನ್ನ ಮದುವೆ ಅಸಾದ್ಯವೆಂದು. ಇದಾದ ಕೆಲವೆ ದಿನದಲ್ಲಿ ಗಂಗಿಯ ತಾಯಿ ತೀರಿಕೊಂಡಳು. ಗಂಗಿ ಮತ್ತು ಶ್ರೀನಿವಾಸರು ಬೇಟಿ ಆಗಲು ಆಗಲಿಲ್ಲ. ಅಷ್ಟರಲ್ಲೆ ಗಂಗಿ ಮತ್ತು ಶ್ರೀನಿವಾಸರ ವಿಷಯ ಹೊಗೆಯಾಡಲು ಶುರುವಾಯಿತು. ಇದು ಶ್ರೀನಿವಾಸರ ತಂದೆ-ತಾಯಿಯವರೆಗೂ ಬಂತು. ತಮ್ಮ ಮನೆಗೆ ತಾವೆ ಬೇಲಿ ಕಟ್ಟಿಕೊಳ್ಳುವುದೆ ಲೇಸು ಎಂದು ಶ್ರೀನಿವಾಸರಿಗೆ ಮದುವೆ ಮಾಡಲು ಯೋಚಿಸಿದರು.  ಅನುಕೂಲಸ್ಥರ ಮನೆ ಒಂದೇ ಮಗ.  ಹೆಣ್ ಹೆತ್ತವರು ಜೇನು ಮುತ್ತಿದಂತೆ ತಮ್ಮ ಮಕ್ಕಳ ಜಾತಕದ ಜೊತೆ ಬಂದರು. ಹದಿನೈದು ದಿನಕ್ಕೆ ಐವತ್ತು ಜಾತಕ ಬಂದಿತು. ಹೊನ್ನಳ್ಳಿಯ ಜೋಯಿಸರ ಮಗಳು ಸಾವಿತ್ರಿ ಎಂಬ ಹುಡುಗಿ ಜಾತಕ ಕೂಡಿ ಬಂತು. ಹೆಣ್ಣು ನೋಡುವ ಶಾಸ್ತ್ರವು ಆಯಿತು. ಸಾವಿತ್ರಿ ಬೆಳ್ಳಗೆ ಗುಂಡು-ಗುಂಡಾಗಿ ಲಕ್ಷಣವಾಗಿದ್ದಳು. ಒಳ್ಳೆ ಮನೆತನ ಜಾತಕವು ಚನ್ನಾಗಿ ಕೂಡಿ ಬಂದ ಕಾರಣ ಶ್ರೀನಿವಾಸ ರಾಯರ ಮತ್ತು ಸಾವಿತ್ರಮ್ಮನವರ ವಿವಾಹ ಕಣ್ಣು ಮುಚ್ಚಿ ಒಡೆಯುವುದರೊಳಗೆ ಮುಗಿದೆ ಹೋಯಿತು. ಮುತ್ತಿನಂತ ಹೆಂಡತಿ, ಮಕ್ಕಳು ಎಂದು ತಮ್ಮ ಸಂಸಾರದಲ್ಲಿ ಮುಳುಗಿ ಹೋದರು.
ಶ್ರೀನಿವಾಸ ರಾಯರು ಬಾವಿ ಕಟ್ಟೆ ಮೇಲೆ ಕುಳಿತು ತಮ್ಮ ಗತಕಾಲದ ಬಗ್ಗೆ ಮೆಲುಕು ಹಾಕಿದರು. ಗಂಗಿ ಮತ್ತು ತಮ್ಮ ಸಂಭಂದದ ಬಗ್ಗೆ ಯೋಚಿಸುತ್ತ ತನ್ನಿಂದ ಅವಳಿಗೆ ಆದ ಅನ್ಯಾಯ ಮತ್ತು ಅವಳ ಬಗ್ಗೆ ಒಮ್ಮೆಯು ತಿರುಗಿ ನೋಡದೆ ಇರೋ ದನ್ನು ಯೋಚಿಸಿ ಮರುಕ ಪಟ್ಟರು. ಅವಳು ತನ್ನ ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಬಗ್ಗೆ ಹೇಳಿದ್ದು ನೆನಪಾಗಿ ಆ ಮಗುವಿನ ಬಗ್ಗೆ ಕನಿಕರ ಹುಟ್ಟಿತು. ಗಂಗಿ ಗೆ ತಾಳಿ ಕಟ್ಟದಿದ್ದರು ಆ ಮಗು ತನ್ನದೆ ಎಂದು ಹೇಗಾದರು ಅವರ ಬಗ್ಗೆ ತಿಳಿದುಕೊಳ್ಳ ಬೇಕು ಎಂದು ಯೋಚಿಸಿದರು. ತಾನು ಆಗ ಮಾಡಿದ ತಪ್ಪಿಗೆ ಈಗಲಾದರು ಸಹಾಯ ಮಾಡಬೇಕು ಎಂದು ಯೋಚಿಸಿದರು. ಎನಿಲ್ಲವೆಂದರು ಗಂಗಿ ಮತ್ತು ಮಗುವಿಗೆ ಹಣಕಾಸಿನ ಸಹಾಯ ಮಾಡಬೇಕು ಎಂದು ತಿರ್ಮಾನ ಮಾಡಿದರು.
ರಾಯರು ಯೋಚನೆಯಲ್ಲಿ ಕತ್ತಲು ಆವರಿಸಿತ್ತು. ಬೆಸರದಲ್ಲಿಯೇ ಮನೆ ಕಡೆ ಹೆಜ್ಜೆ ಹಾಕಿದರು. ಮನೆಗೆ ಬಂದ ರಾಯರಿಗೆ ಊಟ ಬೇಡವಾಗಿತ್ತು. ಇವರ ಸಪ್ಪೆ ಮುಖ ನೋಡಿ ಸಾವಿತ್ರಮ್ಮ ಏನಾಯಿತು? ಎಂದು ಕೇಳಿದರು. ರಾಯರು ಏನೋ ಹಾರಿಕೆ ಉತ್ತರ ಕೊಟ್ಟು ತಮ್ಮ ಪಾಡಿಗೆ ಹೋಗಿ ಮಲಗಿದರು.
ಮರುದಿನ ರಾಯರು ಸ್ವಲ್ಪ ಬೇಗ ಎದ್ದು ತಮ್ಮ ನಿತ್ಯ ಕರ್ಮವನ್ನು ಮುಗಿಸಿ ತೋಟದ ಇನ್ನೊಂದು ದಿಂಬಕ್ಕೆ ಹೊರಟರು. ಅಲ್ಲಿ ಗಂಗಿಯ ತವರು ಮನೆ ಸಂಭಂದಿಗಳು ಮಣ್ಣಿನ ಕೆಲಸ ಮಾಡುತ್ತಿದ್ದರು. ರಾಯರು ಗಂಗಿಯ ಚಿಕ್ಕಪ್ಪನ ಮಗನ ಹತ್ತಿರ ಉಪಾಯವಾಗಿ ಸುತ್ತಿ ಬಳಸಿ ಅವರ ಮನೆಯ ವಿಷಯ ಮಾತಾಡಲು ಶುರು ಮಾಡಿದರು. ಮಾತಿನ ಮದ್ಯೆ ಕೆಲಸಕ್ಕೆ ಜನ ಸಾಕಾಗುವುದಿಲ್ಲ ಎಂದಾಗ  ನಿಮ್ಮ ಮನೆ ಹೆಣ್ಣುಮಕ್ಕಳನ್ನು ಬೇರೆ ಊರಿಂದ ಕರೆ ತನ್ನಿ ಇದರಿಂದ ಅವರಿಗೂ ಕೆಲಸ ಸಿಕ್ಕಿದ ಹಾಗೆ ಆಗುತ್ತದೆ ಎಂದು ಕೇಳಿದರು. ಆಗ ಆ ಆಳು ತಮ್ಮ ಮನೆಯ ಹಳೆ ಪುರಾಣ ಹೇಳುತ್ತ ಹೇಗೋ ಗಂಗಿಯ ವಿಷಯ ಹೇಳಿದ. ಅದನ್ನು ಕೇಳಿ ರಾಯರು ನಿಂತಲ್ಲೆ ನಡುಗಿದರು. ಆ ಆಳು ಈಗಿನ ಕಾಲದವನು ಮತ್ತು ಹಳೆ ಕಥೆ ಆಗಲಿ, ಇವರಿಬ್ಬರ ಸಂಭಂದದ ಬಗ್ಗೆ ಆಗಲಿ ತಿಳಿದಿಲ್ಲದ ಕಾರಣ ಅವನು ಸಹಜವಾಗಿ ಹೇಳಿದ,” ನಮ್ಮ ಗಂಗಿಯತ್ತಿಗೆ ಯಾರೋ ಮದುವೆ ಆಗದೆ ಬಸುರಿ ಮಾಡಿ ಕೈ ಕೊಟ್ಟರು. ಯಾರ್ ಎಷ್ಟು ಹೇಳಿದ್ರು ಹೊಟ್ಟೆ ಕರಗಿಸದೆ ಹೆಣ್ಣು ಮಗುವಿಗೆ ಜನ್ಮ ಕೊಟ್ಳು. ಬೇರೆ ಯಾರನ್ನು ಮದುವೆ ಆಗ್ದೆ ನಮ್ ಅತ್ತಿ ಅವ್ರ ನೆನ್ಪಲ್ಲೆ ಇದ್ರಂತೆ. . ನನ್ಗೆ ಜಾಸ್ತಿ ಏನ ಗೊತ್ತಿಲ್ಲ. ಒಟ್ಟನಲ್ಲಿ ಮೋಸ ಹೋದ್ ತಪ್ಪಿಗೆ ಸುಮಾರು ವರ್ಷದ ಹಿಂದೆ ಮಗಿನ್ ಜೊತೆ ಅತ್ತಿ ಕೂಡ ಹೊಳೆ ಹಾರಿ ಜೀವ ಬಿಟ್ಳಂತೆ” ಎಂದನು.
ರಾಯರಿಗೆ ಇದನ್ನು ಕೇಳಿದ್ದೆ ಶಾಕ್ ಆಯಿತು.  ಹೇಗೊ ಅಲ್ಲಿಂದ ಬಂದು ಬಾವಿ ಕಟ್ಟೆ ಮೇಲೆ ಕುಳಿತು ಬಿಕ್ಕಿ ಬಿಕ್ಕಿ ಅತ್ತರು. ತಾನ್ ಮಾಡಿದ ತಪ್ಪಿಗೆ ಎರಡು ಜೀವ ಹೋಗಿದ್ದು ನೆನೆದು ತಲೆ ಜಜ್ಜಿಕೊಂಡು ಅತ್ತರು. ಪುಟ್ಟ ಹೆಣ್ಣು ಮಗು ಅವರ ಕಣ್ಣು ಮುಂದೆ ಬಂತು. ಅದರ ಕಿಲ-ಕಿಲ ನಗು ಕೇಳಿಸಿದ ಹಾಗಾಯಿತು. ಅಲ್ಲಿ ಕುಳಿತುಕೊಳ್ಳಲು ಸಾದ್ಯವಾಗದೆ ಸರಸರನೆ ಮನೆಗೆ ಬಂದರು. ಬಂದವರೆ ಬಚ್ಚಲ ಮನೆಗೆ ಹೋಗಿ ಸ್ನಾನ ಮಾಡಿದರು. ಇವರ  ವರ್ತನೆ ಸಾವಿತ್ರಮ್ಮನಿಗೆ  ವಿಚಿತ್ರವೆನಿಸಿತು. ಕೆಲವೊಮ್ಮೆ ಹಸು ಸತ್ತಿದ್ದನ್ನು ನೋಡಿದರು ಹೀಗೆ ಮಾಡುತ್ತುದ್ದರು. ಆದರೆ ಇಂದು ಮಂಕಾಗಿ ತಮ್ಮ ಕೋಣೆಯಲ್ಲಿ ಕುಳಿತರು. ಸಾವಿತ್ರಮ್ಮ  ಮಾಳಿಗೆಯ ಮೇಲೆ ಇದ್ದ ಮಗನನ್ನು ಕರೆದು ಹೇಳಿದರು. ಮಗ ಇದಕ್ಕೆ ಜಾಸ್ತಿ ತಲೆಕೆಡಿಸಿಕೊಳ್ಳದೆ “ ಯಾವುದೋ ವಿಷಯಕ್ಕೆ ಬೆಸರ ಆಗಿರ ಬೇಕು. ಒಂದೆರಡು ದಿನ ಸುಮ್ಮನಿರು ತಾವಾಗೆ ಸರಿ ಹೋಗ್ತಾರೆ.” ಎಂದನು. ಆದರೆ ಇದು ಒಂದೆರಡು ದಿನಕ್ಕೆ ಸರಿ ಹೋಗದೆ ರಾಯರ ಮನಸ್ಥಿತಿ ದಿನ ದಿನಕ್ಕು ಹದಗೆಡುತ್ತಿತ್ತು. ಯಾವುದರಲ್ಲು ಆಸಕ್ತಿ ಇಲ್ಲ. ಅವರಷ್ಟಕ್ಕೆ ಅವರು ಅಳುತ್ತಿದ್ದರು. ಮಾತಿಗೊಮ್ಮೆ ತಾನು ತಪ್ಪು ಮಾಡಿದೆ ಎಂದು ಹೇಳುತ್ತಿದ್ದರು. ಆದರೆ ಗಂಗಿ ಮತ್ತು ಮಗುವಿನ ವಿಷಯ ಮನೆಯಲ್ಲಿ ಯಾರಿಗೂ ತಿಳಿದಿರಲಿಲ್ಲ. ರಾಯರು ಬಾಯಿ ಬಿಡಲಿಲ್ಲ.  ಊರಿನ ಕೆಲವು ಹಿರಿ ತಲೆಗಳಿಗೆ ತಿಳಿದಿದ್ದರು ಯಾರಿಗೂ ಈ ವಿಷಯ ನೆನಪೆ ಇಲ್ಲ, ಅದು ಯವಾಗಲೊ ಮುಗಿದ ಅದ್ಯಾಯವಾಗಿತ್ತು. ಅದು ಅಲ್ಲದೆ ಊರಲ್ಲಿ ಈ ತರ ಘಟನೆಗಳು ತುಂಬಾ ಆಗಿದ್ದವು.
ರಾಯರ ವರ್ತನೆ ಹೆಂಡತಿ ಮತ್ತು ಮಗನಿಗೆ ದೊಡ್ಡ ಸಮಸ್ಯೆ ಆಯಿತು. ಮಗ ತನ್ನ ಮದುವೆ ವಿಚಾರ ಅಪ್ಪ ಮನಸ್ಸಿಗೆ ಹಚ್ಚಿಕೊಂಡಿರ ಬೇಕು ಎಂದು ಅಪ್ಪನನು ಸಮಾಧಾನ ಪಡಿಸಿದ. “ಅಪ್ಪ ಜೀವನದಲ್ಲಿ ಮದುವೆನೆ ಮುಖ್ಯ ಅಲ್ಲ. ನಮಗೆ ಹೊಂದಿಕೆ ಆಗದೆ ಇರೋ ರನ್ನು ತಂದು ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುವದಕ್ಕಿಂತ ನಾನು ನನ್ನ ಕೃಷಿ ಕೆಲಸದಲ್ಲಿ ನೆಮ್ಮದಿ ಆಗಿದ್ದೆನೆ. ಅದು ಅಲ್ಲದೆ ಅಕ್ಕಂದಿರ ಮಕ್ಕಳು ನಮ್ಮನೆ ಮೊಮ್ಮಕ್ಕಳೆ ಅಲ್ವಾ…ಅವರು ನಮ್ಮನೆ ಗೆ ಸಂಭಂದ ಪಟ್ಟವರಲ್ಲವಾ..” ಎಂದು ಹೇಳಿದ್ದೆ ರಾಯರು ಬಿಕ್ಕಿ-ಬಿಕ್ಕಿ ಅಳಲು ಶುರು ಮಾಡಿದರು.  ರಾಯರಿಗೆ ಮಗ “ಅಕ್ಕಂದಿರ ಮಕ್ಕಳು ಹೇಳಿದ್ದು”  ರಾಯರಿಗೆ ಗಂಗಿ ಯ ಜೊತೆ ಸತ್ತ ಮಗುವಿನ ನೆನಪಾಯಿತು. ಮಗನಿಗೆ ತಾನು ಹೇಳಿದ್ದು ತಪ್ಪಾಯಿತೆನೋ ಎಂದು ಅಪ್ಪನಿಗೆ ಸಮಾಧಾನ ಮಾಡಿ ಮಲಗಿ ಎಂದು ರೂಮಿನಿಂದ ಹೋದನು. ರಾಯರಿಗೆ ನಿದ್ದೆ ಬರೋದ್ ಹಾಗಿರಲಿ,ಮಗ ಮದುವೆ ನೆ ಮುಖ್ಯ ಅಲ್ಲ ಹೇಳಿ ಅಂದದ್ದು ಕರುಳು ಹಿಂಡಿದಂತಾಯಿತು. ತಾನಿ ಅವನಿಗಿಂತ ಚಿಕ್ಕ ವಯಸ್ಸಿನಲ್ಲೆ ಬೇರೆ ಹೆಣ್ಣಿನ ಸಹವಾಸ ಮಾಡಿ ಅವಳ ಜೀವನ ಹಾಳು ಮಾಡಿದೆ. ಆದರೆ ಮಗ ನಿಯತ್ತಿನಲ್ಲಿ ಇರೋದನ್ನು ನೋಡಿ ತಮ್ಮ ಮೇಲೆ ಮತ್ತು ಅಸಹ್ಯ ವೆನಿಸಿ ಬಚ್ಚಲ ಮನೆಗೆ ಹೋಗಿ ಸ್ನಾನ ಮಾಡಿದರು. ನಡು ಮನೆಯಲ್ಲಿ ಇರೋ ಸಾವಿತ್ರಮ್ಮ ಮತ್ತು ಮಗನಿಗೆ ದಿಗಿಲಾಯಿತು. ಅದು ಅಲ್ಲದೆ ಊರಲ್ಲಿ ಕೆಲವರು ಮಗನ ಮದುವೆ ಅಗದ ಕಾರಣ ರಾಯರು ಮಂಕಾಗಿದ್ದಾರೆ ಎಂದು ಹೊಗೆಯಾಡಲು ಶುರುವಾಯಿತು. ಸುಬ್ರಮಣ್ಯ ಎನು ಮಾಡಲು ತೋಚದೆ ಅಕ್ಕ-ಭಾವಂದಿರಿಗೆ ಹೇಳಿ ಕಳಿಸಿದ.
ರಾಯರ ಆರೋಗ್ಯ ವಿಚಾರಿಸಲು ಹೆಣ್ಣುಮಕ್ಕಳು ಅಳಿಯಂದಿರು ಮತ್ತು ಮೊಮ್ಮಕ್ಕಳು ಬಂದರು. ಯಾವಾಗಲು ಲವಲವಿಕೆಯಿಂದ ಓಡಾಡುತ್ತಿರೋ ಅಪ್ಪ ಕೋಣೆಯಲ್ಲಿ ಮಂಕಾಗಿರೋದನ್ನು ನೋಡಿ ಆಶ್ಚರ್ಯವಾಯಿತು. ರಾಯರು ತನ್ನ ಮಕ್ಕಳು.ಮೊಮ್ಮಕ್ಕಳನ್ನು ನೋಡಿದ್ದೆ ಬಿಕ್ಕಿ-ಬಿಕ್ಕಿ ಅಳಲು ಶುರು ಮಾಡಿದರು. ಯಾಕ್ ಅಪ್ಪ ಏನಾಯ್ತು? ಅಂತ ಕೇಳಿದ್ರೆ, “ನಿಮ್ಮನ್ನೆಲ್ಲ  ಆ ದೇವರು ಗಂಡ ಮಕ್ಕಳ ಜೊತೆ ಚನ್ನಾಗಿ ಇಟ್ಟಿದ್ದಾನೆ. ಆದ್ರೆ ನಾ ಮಾಡಿದ್ ಪಾಪಕ್ಕೆ…” ಅಂತ ಅಳ್ತಾ ಮಂಕಾಗಿ ಕೂತರು. ಸಾವಿತ್ರಮ್ಮ ಕಣ್ಣಿರು ಹಾಕ್ತಾ ಅಡಿಗೆ ಮಗೆ ಕಡೆ ಹೋದರು. ಸುಬ್ರಮಣ್ಯ ತನ್ನ ಮದುವೆ ವಿಷಯಕ್ಕೆ ಎಂದು ಜಗುಲಿಯ ಕಡೆ ಹೋದನು. ಆದರೆ  ಅವರ ಮನ್ಸಸ್ಸಿನಲ್ಲಿ ಗಂಗಿ ಮತ್ತು ಆ ಹೆಣ್ಣು ಮಗು ನದಿಗೆ ಹಾರಿ ಪ್ರಾಣ ಬಿಟ್ಟಿದ್ದು ಇತ್ತು. ಅದು ಅಲ್ಲದೆ ಇವರನ್ನೆಲ್ಲ  ನೋಡಿ ಗಂಗಿ ಮಗಳು ಇದ್ದರೆ ಇವಳಷ್ಟೆ ದೊಡ್ಡದಾಗಿ ಇರ್ತಿದ್ದಳು. ತಾನು ಮಾಡಿದ ತಪ್ಪಿಗೆ ಆ ಎರಡು ಹೆಣ್ಣು ಜೀವ ಬಲಿ ಆಯಿಯು ಎಂದು ಒಳ-ಒಳಗೆ ಸಂಕಟ ಪಡ್ತಾ ಇದ್ದರು. ಹೆಣ್ಣು-ಮಕ್ಕಳು ಹೇಗೋ ಅಪ್ಪನನ್ನು ಸಮಾಧಾನ ಮಾಡಿದರು. ಸುಬ್ರಮಣ್ಯನಿಗೂ ಕಂಕಣ ಕೂಡಿ ಬರತ್ತೆ, ನೋಡ್ತ ಇರಿ ಅಪ್ಪ ನೀವು ಮತ್ತು ಅಮ್ಮ ಯಾರಿಗೂ ಅನ್ಯಾಯ ಮಾಡಿಲ್ಲ. ದೇವರು ಅವನಿಗೆ ಒಳ್ಳೆ ಹೆಂಡತಿ, ಮಕ್ಕಳನ್ನು ಕೊಡ್ತಾನೆ ಅಂದರು. ಅನ್ಯಾಯ ಅನ್ನೋ ಶಬ್ದ ಕೇಳಿದ್ದೆ ಕೇಳಿದ್ದು ರಾಯರ ಕಣ್ಣಲ್ಲಿ ಗಳ-ಗಳನೆ ಕಣ್ಣೀರು ಸುರಿಯಿತು. ಯಾರಿಗೂ ಮುಂದೆನು  ಮಾತಾಡಲು ತೋಚದೆ ಅಪ್ಪನನ್ನು ಮಲಗಿಸಿ ಎಲ್ಲರೂ ಕೋಣೆಯಿಂದ ಆಚೆ ಬಂದರು.
ರಾಯರ ಪರಿಸ್ಥಿತಿ ನೋಡಿ ಎಲ್ಲರಿಗೂ ಆತಂಕವಾಯಿತು. ರಾಯರ  ಒಬ್ಬ ಅಳಿಯ ಸುಬ್ರಮಣ್ಯನ ಹತ್ತಿರ ಸೂಕ್ಷ್ಮವಾಗಿ ಇವರನ್ನು ಯಾವುದಾದರು ಮಾನಸಿಕ ಡಾಕ್ಟರ್ ಬಳಿ ತೋರಿಸುವುದು ಉತ್ತಮ. ಮನಸ್ಸಿನಲ್ಲಿ ಏನೋ ಕೊರಿತಾ ಇದೆ. ಅವರಿಗೆ ಮುಕ್ತವಾಗಿ ಯಾರ ಹತ್ತಿರನೂ ಹೇಳಿಕೊಳ್ಳಲು ಆಗುತ್ತಿಲ್ಲ. ಪರಿಸ್ಥಿತಿ ಕೈ ಮೀರುವುದರೊಳಗೆ ಸಿಟಿಗೆ ಹೋಗಿ ತೋರಿಸಿದರಾಯಿತು. ಯಾರಲ್ಲು ಈ ವಿಷಯ ಮಾತಾಡೋದು ಬೇಡ. ಮನೆಯಲ್ಲು ಯಾರಿಗೂ ಹೇಳೋದು ಬೇಡ. ನಾವೆ  ಅವರನ್ನು ಸಿಟಿ ಡಾಕ್ಟರ್ ಹತ್ತಿರ್ ತೋರಿಸಿಕೊಂಡು ಬರುವುದಾಗಿ ಹೇಳಿದರಾಯಿತು ಅಂದ. ಇದಕ್ಕೆ ಸುಬ್ರಮಣ್ಯನು ಒಪ್ಪಿದ.
ಭಾವನ ಮಾತಿನ ಹಾಗೆ ಯಾರಿಗೂ ಯಾವ ವಿಷಯ ಹೇಳದೆ ಸಿಟಿ ಡಾಕ್ಟರಿಗೆ ಅಪ್ಪನನ್ನು ತೋರಿಸಿಕೊಂಡು ಬರುವುದಾಗಿ ಮನೆಯಲ್ಲಿ ಹೇಳಿ ಅಪ್ಪ,ಮಗ, ಮತ್ತು ಎರಡು ಭಾವಂದಿರು ಹೋದರು.
ಇತ್ತ ಅಕ್ಕಂದಿರು ಕೈ ಕಟ್ಟಿ ಕೂರಲಿಲ್ಲ. ಅವರ ಬಳಗದಲ್ಲೆ  ಸ್ವಲ್ಪ ಬಡತನದಲ್ಲಿ ಇದ್ದ ಒಂದು ಹೆಣ್ಣನ್ನು ಹುಡಿಕಿದರು. ವಿದ್ಯೆ ,ರೂಪದಲ್ಲಿ ಸುಬ್ರಮಣ್ಯನಿಗೆ ತಕ್ಕನಾಗಿದ್ದಳು. ಅಂತಸ್ತಿನ ಅಹಃ ಕರಗಿ ಹೋದ ಕಾರಣ ತಾವೆ ದುಡ್ಡು ಕೊಟ್ಟು ಮದುವೆ ಮಾಡಿಕೊಳ್ಳುವುದಾಗಿ ಮಾತಾಡಿದ್ದರು. ಸುಬ್ರಮಣ್ಯನು ಈ ಮದುವೆಗೆ ಒಪ್ಪುತಾನೆಂದು ಅವನು ಬಂದ ಮೇಲೆ ಮುಂದಿನ ಮಾತು ಕಥೆ ಎಂದು ತಿರ್ಮಾನ ಮಾಡಿದರು.
ಅತ್ತ ಸಿಟಿಗೆ ಹೋದ ರಾಯರು ಮನೆಗೆ ವಾಪಸ್ ಬಂದರು. ಸ್ವಲ್ಪ ಮಟ್ಟಿಗೆ ಸುಧಾರಿಸಿದರು ಮಂಕಾಗಿಯೆ ಇರುತ್ತಿದ್ದರು. ಆದರು ವೈದ್ಯರಲ್ಲಿ ಮನಸ್ಸು ಬಿಚ್ಚಿ ಎಲ್ಲ ಹೊರ ಹಾಕಿದ ಮೇಲೆ ಸ್ವಲ್ಪ ಮನಸ್ಸು ಹಗುರವಾಯಿತು. ಅದಕ್ಕೂ ಹೊರತಾಗಿ ಮಗನ ಸಮಾಧನ ದೊರಕಿತು. ಈ ಸತ್ಯ ಮನೆಯಲ್ಲಿ ಯಾರಿಗು ತಿಳಿಯದೆ ಈ ಮೂವರಲ್ಲೆ ಇತ್ತು.
ಇತ್ತ ಅಕ್ಕಂದಿರು ನೋಡಿದ ಹುಡುಗಿ ಸುಬ್ರಮಣ್ಯನಿಗೂ ಒಪ್ಪಿಗೆ ಆಯಿತು. ಮೊದಲೆ ಮಾತು ಕೊಟ್ಟಂತೆ ಹೆಣ್ಣಿನ ಮನೆಯವರಿಗೆ ಹಣಕಾಸಿನ ಸಹಾಯ ಮಾಡಿದರು.ಮದುವೆಯನ್ನು ಇವರ ಮನೆ ಮುಂದೆ ಚನ್ನಾಗಿ ಮದುವೆ ಆಯಿತು. ಸಾವಿತ್ರಮ್ಮನಿಗೆ  ಮಗ ಸಂಸಾರಸ್ಥನಾಗಿ ಮನೆಗೆ ಸೊಸೆ ಬಂದ ಸಡಗರ. ಅಕ್ಕಂದಿರಿಗೂ ಏನೋ ಸಮಾಧಾನ.  ರಾಯರು ಮಾತ್ರ ಹೇಳಿದ್ದಕ್ಕೆ ಉತ್ತರ ಕೊಟ್ಟು ತಮ್ಮ ಪಾಡಿಗೆ ತಾವಿದ್ದರು. ಎಷ್ಟೆ ಔಷದಿ ಬರಲಿ, ಸಮಾಧಾನ ಮಾತಾಗಲಿ ತಾವು ಮಾಡಿದ ತಪ್ಪು ಒಳ-ಒಳಗೆ ಚುಚ್ಚುವುದು.ಬಿಸಿ ರಕ್ತದಲ್ಲಿ ಎನು ಅನ್ನಿಸದೆ ಇದ್ದರು  ವಯಸ್ಸಾದ ಮೇಲೆ ಒಳ-ಒಳಗೆ ನಮ್ಮನ್ನು ತಿಂದೆ ತಿನ್ನುವುದು.





No comments: